ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಅತಿ ಕಿರಿಯ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ 28 ವರ್ಷದ ತೇಜಸ್ವಿ ಸೂರ್ಯ 2014ರ ಒಂದು ಟ್ವೀಟ್ ಡಿಲೀಟ್ ಮಾಡಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿರುವ ತೇಜಸ್ವಿ ಅವರು 2014ರ ಜೂನ್ 10 ರಂದು, “ಮಹಿಳಾ ಮೀಸಲಾತಿ ಮಸೂದೆ ಹೊರತು ಪಡಿಸಿ ಮೋದಿ ಸರ್ಕಾರದ ಕಾರ್ಯಗಳು ಸ್ಫೂರ್ತಿದಾಯಕ. ಮಹಿಳಾ ಮೀಸಲಾತಿ ವಾಸ್ತವವಾಗಿ ಜಾರಿಗೆ ಬಂದರೆ ಭಯ ಉಂಟಾಗುತ್ತದೆ” ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಅವರು ಈಗ ಡಿಲೀಟ್ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಘೋಷಣೆಯಾದ ಬಳಿಕ ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ.
ಕಾನೂನು ಪದವಿ ಓದಿರುವ ತೇಜಸ್ವಿ ಸೂರ್ಯ, ಪ್ರಸ್ತುತ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಾಮಾಜಿಕ ಜಾಲತಾಣದ ಸದಸ್ಯರಾಗಿರುವ ಇವರು ಶಾಸಕ ರವಿ ಸುಬ್ರಮಣ್ಯ ಅವರ ಅಣ್ಣನ ಮಗ. ಎಬಿವಿಪಿ, ಆರ್ ಎಸ್ಎಸ್ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾಧ್ಯಮಗಳಲ್ಲಿ ಪಕ್ಷದ ಪರವಾಗಿ ಭಾಗವಹಿಸುತ್ತಿರುವ ಇವರು ಉತ್ತಮ ಭಾಷಣಕಾರರಾಗಿದ್ದಾರೆ.