ಬೆಂಗಳೂರು: ಒಂದಂಕಿ ಲಾಟರಿ ಪ್ರಕರಣ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಸಿಬಿಐ ಅಧಿಕಾರಿಗಳಿಂದಲೂ ತನಿಖೆ ನಡೆದಿತ್ತು, ಐಪಿಎಸ್ ಅಧಿಕಾರಿಗಳೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಈಗ ಇಡೀ ಪ್ರಕರಣಕ್ಕೆ ಸಿಬಿಐ ಅಧಿಕಾರಿಗಳೇ ಟ್ವಿಸ್ಟ್ ನೀಡಿದ್ದು, ಪ್ರಮುಖ ಆರೋಪಿ ಅನ್ನಿಸಿಕೊಂಡಿದ್ದ ಪಾರಿರಾಜನ್ ಮೇಲಿನ ಪ್ರಕರಣ ಹಿಂಪಡೆದರೆ, ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ.
ಎಡಿಜಿಪಿ ಆಗಿರುವ ಅಲೋಕ್ಕುಮಾರ್ ಮತ್ತು ನಿವೃತ್ತ ಎಸ್ಪಿ ಧರಣೇಂದ್ರಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಅಷ್ಟೇ ಅಲ್ಲದೆ ಪಾರಿರಾಜನ್ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲು ಮಾಡಿದ್ದಾರೆ. ಜೊತೆಗೆ ನಿವೃತ್ತ ಐಜಿಪಿ ಪದ್ಮನಯನ ಮತ್ತು ಪಿಐ ಕನಕಲಕ್ಷ್ಮಿ ಸೇರಿದಂತೆ 10 ಜನರ ವಿರುದ್ಧ ದೋಷಾರೋಪಪಟ್ಟಿಯನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.
ಒಂದಂಕಿ ಲಾಟರಿಯಲ್ಲಿ ಬಹುಕೋಟಿ ಹಗರಣ ನಡೆದಿದೆ. ಆಗ ಐಜಿಪಿಯಾಗಿದ್ದ ಅಲೋಕ್ ಕುಮಾರ್ ಪಾರಿರಾಜನ್ ಜೊತೆಯಲ್ಲಿ ಸೇರಿಕೊಂಡು ಕೋಟ್ಯಂತರ ರೂ. ಹಗರಣ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪಾರಿರಾಜನ್ ಮನೆಗೆ ಅಲೋಕ್ ಕುಮಾರ್ ಹೋಗಿ ಬರುತ್ತಿದ್ದರು ಎಂದು ಆರೋಪ ಮಾಡಿ ಸಿಬಿಐ ತನಿಖೆ ನಡೆಸಿತ್ತು. ಈ ಪ್ರಕರಣದಿಂದ ಅಲೋಕ್ ಕುಮಾರ್ ಒಮ್ಮೆ ಅಮಾನತು ಕೂಡ ಆಗಿದ್ದರು.