ಬೆಂಗಳೂರು: ಕೊರೊನಾ ವಿರುದ್ಧ ಸರ್ಕಾರ ಜಾರಿ ಮಾಡಿರುವ ನಿಯಮವನ್ನು ಪಾಲಿಸಿ ಎಂದು ನಟ ಶಿವರಾಜ್ ಕುಮಾರ್ ಅವರು ಜನರಲ್ಲಿ ಕೈಮುಗಿದು ಮನವಿ ಮಾಡಿದ್ದಾರೆ.
ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಅನ್ನು ತಡೆಯಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೆ ತರುತ್ತಿವೆ. ಆದರೆ ಇದನ್ನು ನಮ್ಮ ಜನರು ಸರಿಯಾಗಿ ಪಾಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಶಿವಣ್ಣ ಸರ್ಕಾರ ನಿಯಮ ಪಾಲಿಸಿ, ಈ ಕೊರೊನಾ ವೈರಸ್ ವಿರುದ್ಧ ಹೋರಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಯುಗಾದಿ ಹಬ್ಬವನ್ನು ಸಿಂಪಲ್ ಆಗಿ ಮನೆಯ್ಲಲೇ ಮನೆಯವರ ಜೊತೆ ಅರ್ಥಪೂರ್ಣವಾಗಿ ಆಚರಿಸೋಣ. ದಯವಿಟ್ಟು ಮನೆಗಳಲ್ಲೇ ಇರಿ. ಹೊರಗೋಗಬೇಡಿ. ???????? pic.twitter.com/7xjCrQ3zNn
— DrShivaRajkumar (@NimmaShivanna) March 24, 2020
ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಡಿಯೋ ಮಾಡಿರುವ ಶಿವಣ್ಣ, ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಶಿವಣ್ಣ, ಸರ್ಕಾರ ರೂಪಿಸಿರುವ ನಿಯಮವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸೋಣ. ಈ ಕೊರೊನಾ ಬಂದು ಎಲ್ಲರಿಗೂ ತೊಂದರೆ ಕೊಟ್ಟಿದೆ. ಅದನ್ನು ತಡೆಗಟ್ಟುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಕೇಳಿಕೊಂಡಿದ್ದಾರೆ.
ನಮಗೂ ಗೊತ್ತು ಈಗ ಹಬ್ಬ ಬಂದಿದೆ. ಎಲ್ಲರಿಗೂ ಕಷ್ಟವಾಗುತ್ತದೆ. ಆದರೆ ನಾವೆಲ್ಲರೂ ಈ ಹಬ್ಬವನ್ನು ಸರಳ ರೀತಿಯಲ್ಲಿ ಆಚರಣೆ ಮಾಡೋಣ. ನಾನು ಕೂಡ ನಿಮ್ಮ ಜೊತೆಯಲ್ಲಿ ಹಬ್ಬವನ್ನು ಸರಳವಾಗಿಯೇ ಆಚರಣೆ ಮಾಡುತ್ತೇನೆ. ಹಬ್ಬವನ್ನು ಅದ್ಧೂರಿಯಾಗಿ ಜಾಮ್ಜೂಮ್ ಎಂದು ಆಚರಣೆ ಮಾಡುವುದು ಬೇಡ. ತೊಂದರೆ ಎಲ್ಲರಿಗೂ ಆಗಿದೆ. ಆ ತೊಂದರೆ ವಿರುದ್ಧ ಹೋರಾಡುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು ಎಂದು ಶಿವಣ್ಣ ತಿಳಿಸಿದ್ದಾರೆ.
ಎಲ್ಲರೂ ಸಾಧ್ಯವಾದಷ್ಟು ಮನೆಯಲ್ಲೇ ಇರಿ. ನಾನು ಟಿವಿಯಲ್ಲಿ ನೋಡಿದ್ದೇನೆ ಸಾಕಷ್ಟು ಜನ ಹೊರಗೆ ಬಂದು ಪೊಲೀಸರ ಕೈಯಲ್ಲಿ ಏಟು ತಿನ್ನುತ್ತಿದ್ದಾರೆ. ನಮ್ಮಿಂದ ಪೊಲೀಸರಿಗೂ ತೊಂದರೆ. ಅವರಿಗೂ ಕೂಡ ಯಾವುದೇ ರೀತಿಯಲ್ಲಿ ಆದರೂ ಸೋಂಕು ತಗಲುಬಹುದು. ಆದರೂ ಅವರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅದಷ್ಟು ಮನೆಯಲ್ಲೇ ಇರಿ ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ತೊಂದರೆ ಕೊಡಬೇಡಿ. ಯಾವಗಲೂ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ. ಅದಷ್ಟು ಬೇಗ ಕೊರೊನಾ ವೈರಸ್ ಹೋಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದು ಶಿವಣ್ಣ ವಿಡಿಯೋ ಮೂಲಕ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.