ಬೆಂಗಳೂರು: ರಾಜ್ಯದ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಸೀಟುಗಳ ಬ್ಲಾಕಿಂಗ್ನಲ್ಲಿ ನಡೆದಿದೆಯೆನ್ನಲಾದ ಸಾವಿರಾರು ಕೋಟಿ ರೂ. ಅವ್ಯವಹಾರದ ಆರೋಪ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆ ಜಾಣ ಮೌನ ವಹಿಸಿದೆ. ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿಯವರು ಇದೇ ತಿಂಗಳ 13 ರಂದು ತಮ್ಮ ಫೇಸ್ಬುಕ್ನ ವಾಲ್ ನಲ್ಲಿ ಸೀಟ್ ಬ್ಲಾಕಿಂಗ್ ಅಕ್ರಮ ಕುರಿತು ಗಂಭೀರ ಆರೋಪ ಮಾಡಿದ್ದರು. ಆದರೆ 12 ದಿನಗಳಾದರೂ ಶಂಕರ್ ಬಿದರಿಯವರ ಆರೋಪವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಗಂಭೀರವಾಗಿ ತೆಗೆದುಕೊಂಡಿಲ್ಲ.
ಈ ಸಂಬಂಧ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ.ಸುಧಾಕರ್, ಶಂಕರ್ ಬಿದರಿಯವರು ನನಗೆ ಇನ್ನೂ ದೂರು ಕೊಟ್ಟಿಲ್ಲ. ಅವರು ಮಾಡಿದ ಆರೋಪ ಸಂಬಂಧ ದಾಖಲೆಗಳನ್ನು ಇನ್ನೂ ನನಗೆ ತಂದು ಕೊಟ್ಟಿಲ್ಲ. ಬಿದರಿಯವರು ದಾಖಲೆ ತಂದು ಕೊಟ್ಟರೆ ಅದರ ಸಂಬಂಧ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಯಾರು ಬೇಕಾದರೂ ಸುಲಭವಾಗಿ ಆರೋಪ ಮಾಡಬಹುದು. ಹಿರಿಯ ಪೊಲೀಸ್ ಅಧಿಕಾರಿ ಆಗಿದ್ದ ಶಂಕರ್ ಬಿದರಿಯವರು ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡುವ ಬದಲು ನನ್ನ ಬಳಿ ದೂರು ಕೊಡಬಹುದಿತ್ತು. ಬಿದರಿಯವರು ದೂರು ಕೊಟ್ಟ ಬಳಿಕ ಪರಿಶೀಲನೆ ಮಾಡುತ್ತೇನೆ. ಬಿದರಿಯವರು ನನಗೆ ದೂರು ಕೊಟ್ಟಿದ್ರೆ ಸುಲಭವಿತ್ತು. ಅವರು ದೂರು ಕೊಟ್ಟ ಬಳಿಕ ಅದರಲ್ಲಿ ನಿಜಾಂಶವಿದ್ದರೆ ತನಿಖೆಗೆ ಒಳಪಡಿಸುತ್ತೇನೆ ಎಂದು ಹೇಳಿದರು.
ಸಚಿವರ ಮಾತಲ್ಲಿ ಫೇಸ್ ಬುಕ್ ನ ಮೂಲಕ ಶಂಕರ್ ಬಿದರಿಯವರು ಆರೋಪಿಸಿದ್ದಕ್ಕೆ ಅಸಮಧಾನದ ಎಳೆ ಇತ್ತು. ಹಾಗಿದ್ದರೆ ಸೀಟ್ ಬ್ಲಾಕಿಂಗ್ ಅಕ್ರಮ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಲಕ್ಷ್ಯದ ಧೋರಣೆ ತಾಳಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಬಿದರಿಯವರು ಈ ಆರೋಪ ಮಾಡಿ 12 ದಿನಗಳಾದರೂ ವೈದ್ಯಕೀಯ ಶಿಕ್ಷಣ ಇಲಾಖೆ ಸುಮ್ಮನಿದೆ. ಆರೋಪ ಗಮನಕ್ಕೆ ಬಂದರೂ ಕನಿಷ್ಠ ಪ್ರಾಥಮಿಕ ಹಂತದ ಪರಿಶೀಲನೆಯನ್ನೂ ಮಾಡದ ವೈದ್ಯಕೀಯ ಶಿಕ್ಷಣ ಇಲಾಖೆ ಧೋರಣೆಗೆ ಖಂಡನೆ ವ್ಯಕ್ತವಾಗುತ್ತಿದೆ.
ಶಂಕರ್ ಬಿದರಿಯವರ ಆರೋಪ ಏನು?:
ಮೆಡಿಕಲ್ ಸೀಟ್ ಬ್ಲಾಕಿಂಗ್ ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ಸಂಬಂಧ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಫೇಸ್ಬುಕ್ ಪೇಜ್ನಲ್ಲಿ ಅವ್ಯವಹಾರದ ಬಗ್ಗೆ ಪೋಸ್ಟ್ ಹಾಕಿದ್ದರು. ಖಾಸಗಿ ಮೆಡಿಕಲ್ ಕಾಲೇಜುಗಳ ಮೆಡಿಕಲ್ ಸೀಟ್ ಬ್ಲಾಕಿಂಗ್ನಿಂದ ಸಾವಿರಾರು ಕೋಟಿ ಹಣ ಅವ್ಯವಹಾರವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಪತ್ರ ಬರೆದಿದೆ. ಇಷ್ಟು ದೊಡ್ಡ ಅವ್ಯವಹಾರ ಆಗಿದ್ರೂ ಸರ್ಕಾರ, ಐಟಿ ಇಲಾಖೆ ಏನ್ ಮಾಡ್ತಿದೆ? ಪ್ರಕರಣದ ಬಗ್ಗೆ ಮೌನ ವಹಿಸಿ ಖಾಸಗಿ ಲಾಬಿಗೆ ಮಣಿದ್ರಾ? ಎಂದು ಫೇಸ್ ಬುಕ್ ನಲ್ಲಿ ಶಂಕರ್ ಬಿದರಿ ಪ್ರಶ್ನೆ ಮಾಡಿದ್ದರು.