ಬೆಂಗಳೂರು: ಶೀಘ್ರದಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದಲ್ಲಿಯೇ ಮೊದಲ ಆಧಾರ್ ಬಯೋಮೆಟ್ರಿಕ್ ಪ್ರವೇಶವನ್ನು ಹೊಂದಿರುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಹೊಸ ಆಧಾರ್ ಪರಿಶೀಲನಾ ವ್ಯವಸ್ಥೆ 2108 ಮಾರ್ಚ್ ವೇಳೆಗೆ ಆರಂಭವಾಗಲಿದ್ದು, ಡಿಸೆಂಬರ್ 31ರ ವೇಳೆಗೆ ಮುಕ್ತಾಯವಾಗಬೇಕೆಂಬ ಡೆಡ್ಲೈನನ್ನು ಕೆಐಎಎಲ್ ಹಾಕಿಕೊಂಡಿದೆ.
ವಿಮಾನ ನಿಲ್ದಾಣದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯ ಅಳವಡಿಕೆಯಿಂದ ಪ್ರಯಾಣಿಕರ ಪರಿಶೀಲನಾ ವೇಳೆಯು ಕಡಿಮೆಯಾಗಲಿದೆ. ಅಲ್ಲದೆ ರಕ್ಷಣಾ ದೃಷ್ಟಿಯಿಂದಲೂ ಈ ವ್ಯವಸ್ಥೆ ಅತ್ಯುತ್ತಮ ಎಂದು ವಿಶ್ಲೇಷಿಸಲಾಗುತ್ತಿದೆ. ಒಮ್ಮೆ ಪ್ರಯಾಣಿಕರ ವಿವರ ದಾಖಲಾಗಿ ಪ್ರೊಫೈಲ್ ಕ್ರಿಯೆಟ್ ಮಾಡಿದರೆ ಸೇವೆಯನ್ನು ಮತ್ತಷ್ಟು ಸುಧಾರಿಸಲು ಸಹಾಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಪ್ರತಿ ಬಾರಿಯೂ ಪ್ರಯಾಣಿಕರು ದಾಖಲೆಗಳನ್ನು ಪರೀಶಿಲನೆಗೆ ತರುವ ಅಗತ್ಯವಿಲ್ಲವದ್ದರಿಂದ ಮುಕ್ತ ಪ್ರವೇಶವನ್ನು ಪಡೆಯಲು ಸಾಧ್ಯವಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಏರುತ್ತಿರುವುದರಿಂದ ಪ್ರಯಾಣಿಕರ ತ್ವರಿತ ಆಗಮನ ಮತ್ತು ನಿರ್ಗಮನಕ್ಕಾಗಿ ಆಧಾರ್ ಸಂಪರ್ಕ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ.