ಬೆಂಗಳೂರು: ನಟಿ ಸಂಜನಾ ಗಲ್ರಾನಿ ಮತ್ತು ವಂದನಾ ಜೈನ್ ನಡುವಿನ ಗಲಾಟೆ ಪ್ರಕರಣ ಠಾಣೆಯ ಮೆಟ್ಟಿಲು ಹತ್ತಿದ್ದಾಗಿದೆ. ಹೋಟೆಲ್ ನಲ್ಲಿ ನಡೆದ ಗಲಾಟೆಗೆ ವಂದನಾ ಜೈನ್ ನೀಡಿದ್ದ ದೂರಿಗೆ, ಸಂಜನಾ ಪ್ರತಿದೂರು ನೀಡಿದ್ದು ಈಗ ರಾಜಿಯಾಗಲು ಮುಂದಾಗಿದ್ದಾರೆ.
ಡಿಸಿಪಿಯವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಂಜನಾ, ನನಗೆ ಇದನ್ನೆಲ್ಲಾ ಮುಂದುವರಿಸಬೇಕು ಎಂಬ ಆಸೆಯಿಲ್ಲ. ಆಕೆ ಕೊಟ್ಟಿರುವ ದೂರನ್ನು ವಾಪಸ್ ತೆಗೆದುಕೊಂಡರೆ ನಾನು ವಾಪಸ್ ತೆಗೆದುಕೊಳ್ಳುತ್ತೇನೆ. ನಾನು ವಿಸ್ಕಿ ಬಾಟಲ್ ನಲ್ಲಿ ಹೊಡೆದೆ ಎಂದರೆ ನಮ್ಮ ನಿರ್ಮಾಪಕರು, ನಿರ್ದೇಶಕರು ನನ್ನ ಬಗ್ಗೆ ಏನೆಂದುಕೊಳ್ಳಬೇಕು ಎಂದು ಹೇಳುವ ಮೂಲಕ ನಾನು ರಾಜಿಗೆ ರೆಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಆಕೆಯೇ ಗಲಾಟೆ ಶುರು ಮಾಡಿ ಬಾಯಿಗೆ ಬಂದಂತೆ ಬೈದಿರೋದು. ನನ್ನ ರಕ್ಷಣೆಗೆ ಇರಲಿ ಎಂದು ಏಳು ನಿಮಿಷದ ವಿಡಿಯೋ ಮಾಡಿಟ್ಟುಕೊಂಡಿದ್ದೇನೆ. ಫೋಟೋ ತೆಗೆಯಬೇಕು ಎಂದು ಬಂದು ಗಲಾಟೆ ಮಾಡಿದ್ದಾಳೆ. ಅವಳ ಜೊತೆ ನಾನು ಯಾವತ್ತೂ ಹೋಟೆಲ್ಗೂ ಹೋಗಿಲ್ಲ. ನನಗೆ ಇದೆಲ್ಲವನ್ನೂ ಮುಂದುವರಿಸಿ ಪ್ರಚಾರ ತೆಗೆದುಕೊಳ್ಳಬೇಕು ಎಂದು ಇಷ್ಟವಿಲ್ಲ. ಒಂದು ಪಕ್ಷ ವಂದನಾ ದೂರು ವಾಪಸ್ ಪಡೆದರೆ ನಾನು ದೂರು ವಾಪಸ್ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ
ಪತ್ರ ಬರೆದು ಮನವಿ
ಹೋಟೆಲ್ ನಲ್ಲಿ ನಡೆದಿರುವ ಘಟನೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ನನಗೆ ಇಷ್ಟ ಇಲ್ಲ. ದಯವಿಟ್ಟು ಮಾಧ್ಯಮ ಮಿತ್ರರು ಪ್ರಕರಣವನ್ನು ದೊಡ್ಡದು ಮಾಡುವ ಆಗತ್ಯ ಇಲ್ಲ. ಪ್ರಕರಣವನ್ನ ಇಲ್ಲೇ ಬಿಟ್ಟು ಬಿಡುವಂತೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಸಂಜನಾ ಗರ್ಲಾನಿ ನನ್ನನ್ನ ದೂಷಿಸುತ್ತಿರುವ ಮಹಿಳೆಯ ಬಳಿ ಯಾವುದೇ ಪುರಾವೆಗಳಿಲ್ಲ. ಪತ್ರದಲ್ಲಿ ವಿವರಿಸಲು ಆಗದೇ ಇರುವಂತಹ ಪದಗಳನ್ನು ಬಳಸಿ ನನ್ನ ತಾಯಿ ಹಾಗೂ ಕುಟುಂಬಕ್ಕೆ ನಿಂದನೆ ಮಾಡಿದ್ದಾಳೆ. ನನ್ನ ಜೀವನ ಹಾಳು ಮಾಡುವುದಕ್ಕೆ ಅವಳು ಹವಣಿಸುತ್ತಿದ್ದಾಳೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಭಾರತದ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು ಮದುವೆ ಆಗುವುದಾಗಿ ಬ್ಲಾಕ್ ಮೇಲ್ ಮಾಡಿ ಪ್ರಚಾರ ಗಿಟ್ಟಿಸಿಕೊಂಡ ಹಾಗೇ ನನ್ನ ಗುರಿಯಾಗಿ ಪ್ರಚಾರ ಮಾಡುತ್ತಿದ್ದಾಳೆ ಎಂದು ವಂದನಾ ಹೆಸರು ಹೇಳದೆ ಕಿಡಿಕಾರಿದರು. ಇದನ್ನು ಓದಿ: ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ
ಘಟನೆಯಿಂದ ನನ್ನ ತಾಯಿ ನೊಂದು ಹೋಗಿದ್ದಾರೆ. ನನಗೆ ಮುಂದಿನ ವರ್ಷ ಸ್ಯಾಂಡಲ್ವುಡ್ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಿವೆ. ಅವುಗಳನ್ನು ನೋಡಿಕೊಂಡರೆ ಸಾಕು ಈ ರೀತಿ ಅಗ್ಗದ ಕೊಳಕು ಪ್ರಚಾರ ಬೇಡ. ನಾನು ಈ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದೇನೆ. ದಯವಿಟ್ಟು ನನ್ನನ್ನ ಬೆಂಬಲಿಸಿ ಎಂದು ಪತ್ರದ ಮೂಲಕ ಸಂಜನಾ ಗಲ್ರಾನಿ ಮನವಿ ಮಾಡಿಕೊಂಡಿದ್ದಾರೆ.