ಬೆಂಗಳೂರು: ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್ ಪಿವಿಆರ್ ಸೇರಿದಂತೆ ನಾಲ್ಕು ಮಂದಿ ಸೇರಿ ನಿರ್ಮಾಣ ಮಾಡಿರೋ ಸವರ್ಣದೀರ್ಘ ಸಂಧಿ ಚಿತ್ರ ಇದೇ ಹದಿನೆಂಟನೇ ತಾರೀಕಿನಂದು ಬಿಡುಗಡೆಯಾಗಲಿದೆ. ಶೀರ್ಷಿಕೆಯ ಮೂಲಕವೇ ಪ್ರೇಕ್ಷಕರ ಚಿತ್ತ ಸೆಳೆಯುವ ಅಪರೂಪದ ಚಿತ್ರಗಳಿವೆಯಲ್ಲಾ? ಆ ಸಾಲಿನಲ್ಲಿ ಈ ಚಿತ್ರ ನಿಜಕ್ಕೂ ಮುಂಚೂಣಿಯಲ್ಲಿದೆ. ವೀರೇಂದ್ರ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಈ ಸವರ್ಣದೀರ್ಘ ಸಂಧಿಯಲ್ಲಿ ಏನೋ ಇದೆ ಎಂಬ ಭಾವನೆ ಕನ್ನಡದ ಎಲ್ಲ ವರ್ಗದ ಪ್ರೇಕ್ಷಕರಲ್ಲಿಯೂ ಮೂಡಿಕೊಂಡಿದೆ.
ನಿರ್ದೇಶಕ ಕಂ ನಟ ವೀರೇಂದ್ರ ಶೆಟ್ಟಿ ಅಂಥಾದ್ದೊಂದು ಕಮಾಲ್ ಮಾಡಿದ್ದಾರೆ. ಇದೀಗ ಈ ಸಿನಿಮಾ ಹಾಡುಗಳು ಬಿಡುಗಡೆಗೊಂಡು ಅವುಗಳೆಲ್ಲವೂ ಹಿಟ್ ಆಗಿದೆ. ಹಾಗಾದರೆ ವ್ಯಾಕರಣ ಸಂಬಂಧಿ ಶೀರ್ಷಿಕೆ ಹೊಂದಿರುವ ಈ ಸಿನಿಮಾದ ಕಥೆ ಯಾವ ರೀತಿಯದ್ದೆಂಬ ಪ್ರಶ್ನೆ ಮುಂದಿಟ್ಟರೆ ಚಿತ್ರತಂಡ ರೋಚಕವಾದ ಒಂದಷ್ಟು ವಿಚಾರಗಳನ್ನು ಬಿಚ್ಚಿಡುತ್ತದೆ. ಅವೆಲ್ಲವೂ ಈ ಸಿನಿಮಾದತ್ತ ಮತ್ತಷ್ಟು ಆಕರ್ಷಣೆ ಮೂಡಿಸುವಂತಿವೆ. ವ್ಯಾಕರಣದ ಶೀರ್ಷಿಕೆ ಹೊಂದಿರೋ ಇದು ಗ್ಯಾಂಗ್ಸ್ಟರ್ ಚಿತ್ರವೆಂದರೆ ಅದಕ್ಕಿಂತಾ ವಿಚಿತ್ರ ಮತ್ತೇನಿದೆ?
ಸವರ್ಣದೀರ್ಘ ಸಂಧಿಯಲ್ಲಿ ಪಕ್ಕಾ ಡಿಫರೆಂಟಾಗಿರೋ ಗ್ಯಾಂಗ್ ಸ್ಟರ್ ಪ್ರೇಕ್ಷಕರನ್ನು ಸಂಧಿಸಲಿದ್ದಾನೆ. ಗ್ಯಾಂಗ್ಸ್ಟರ್ ಅಂದರೆ ಹೊಡೆದಾಟ ಬಡಿದಾಟಗಳು, ಬಿಲ್ಡಪ್ಪು ಮತ್ತು ಮಚ್ಚು ಲಾಂಗುಗಳ ಮೊರೆತ ಇರುತ್ತದೆಂದುಕೊಳ್ಳುವಂತಿಲ್ಲ. ಈ ಗ್ಯಾಂಗ್ ಸ್ಟರ್ ಭಿನ್ನವಾಗಿರೋದೇ ಆ ಕಾರಣದಿಂದ. ಇಲ್ಲಿನ ಗ್ಯಾಂಗ್ಸ್ಟರ್ ವ್ಯಾಕರಣದಲ್ಲಿ ಪಾರಂಗತ. ಅದರ ಮೂಲಕವೇ ನಗಿಸುತ್ತಾ ನಗುವಿನ ಹೊಳೆಯನ್ನೇ ಹರಿಸುತ್ತಾನೆ. ಅದರ ಸುತ್ತಾ ಕಥೆಯ ಕೊಂಬೆ ಕೋವೆಗಳಿದ್ದರೂ ಇದರ ಪ್ರಧಾನ ಉದಾಹರಣೆ ಮನೋರಂಜನೆ. ಈ ಪ್ರಕಾರವಾಗಿ ನೋಡ ಹೋದರೆ ಇದೇ 18ರಿಂದ ಭರ್ಜರಿ ನಗೆಹಬ್ಬ ಚಾಲೂ ಆಗಲಿದೆ.