ಬೆಂಗಳೂರು: ತುಳು ಚಿತ್ರರಂಗಕ್ಕೂ ಕನ್ನಡ ಚಿತ್ರರಂಗಕ್ಕೂ ನೇರಾ ನೇರ ಕನೆಕ್ಷನ್ನುಗಳಿವೆ. ಇದೀಗ ವ್ಯಾಪಕವಾಗಿ ಮಾರುಕಟ್ಟೆ ವಿಸ್ತರಿಸಿಕೊಂಡಿರುವ ತುಳು ಚಿತ್ರರಂಗದಲ್ಲಿ ಒಂದು ಗೆಲುವು ಕಂಡವರ ಮುಂದಿನ ಕನಸು ಹೆಚ್ಚಿನದ್ದಾಗಿ ಕನ್ನಡ ಚಿತ್ರರಂಗವೇ ಆಗಿರುತ್ತದೆ. ಹಾಗೆ ಒಂದಷ್ಟು ಮಂದಿ ಬಂದು ಕನ್ನಡ ಚಿತ್ರರಂಗದ ಭಾಗವಾಗಿದ್ದಾರೆ. ಇದೀಗ ಸವರ್ಣದೀರ್ಘ ಸಂಧಿ ಚಿತ್ರದ ಮೂಲಕ ಮತ್ತೊಂದು ಪ್ರತಿಭಾವಂತರ ತಂಡದ ಆಗಮನವಾಗಿದೆ. ಅದರಲ್ಲಿಯೂ ತುಳುವಿನಲ್ಲಿ ದಾಖಲೆ ನಿರ್ಮಿಸಿದ್ದ ಚಾಲಿಪೋಲಿಲು ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವೀರೇಂದ್ರ ಶೆಟ್ಟಿ ಇದೀಗ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ತುಳು ಚಿತ್ರರಂಗದಲ್ಲಿ ವೀರೇಂದ್ರ ಶೆಟ್ಟಿ ನಿರ್ದೇಶನ ಮಾಡಿದ್ದ ಮೊದಲ ಚಿತ್ರ ಚಾಲಿಪೋಲಿಲು. ಈ ಸಿನಿಮಾ ಆ ಭಾಷೆಯಲ್ಲಿ ಸೃಷ್ಟಿಸಿದ್ದ ಹವಾ ಸಣ್ಣ ಮಟ್ಟದ್ದೇನಲ್ಲ. ವರ್ಷಾಂತರಗಳ ಕಾಲ ಪ್ರದರ್ಶನಗೊಂಡಿದ್ದ ಚಾಲಿಪೋಲಿಲು ತುಳುವಿನಲ್ಲಿ ಸಾರ್ವಕಾಲಿಕ ದಾಖಲೆಯನ್ನೇ ಮಾಡಿತ್ತು. ಮೊದಲ ಹೆಜ್ಜೆಯಲ್ಲಿಯೇ ಆ ಮಟ್ಟಕ್ಕೆ ಗೆದ್ದಿದ್ದವರು ವೀರೇಂದ್ರ ಶೆಟ್ಟಿ. ಅವರೀಗ ಸವರ್ಣದೀರ್ಘ ಸಂಧಿ ಚಿತ್ರದ ಮೂಲಕ ಕನ್ನಡದಲ್ಲಿಯೂ ಅಂಥಾದ್ದೇ ಗೆಲುವು ಕಾಣುವ ಸೂಚನೆಯೊಂದಿಗೆ ಅಡಿಯಿರಿಸಿದ್ದಾರೆ.
ಸವರ್ಣದೀರ್ಘ ಸಂಧಿ ಆರಂಭಿಕವಾಗಿಯೇ ಸೃಷ್ಟಿಸಿರೋ ಕ್ರೇಜ್ ನೋಡಿದರೆ ವೀರೇಂದ್ರ ಶೆಟ್ಟಿ ಪಾಲಿಗೆ ತುಳು ಚಿತ್ರರಂಗದಲ್ಲಿ ಸಿಕ್ಕ ಯಶಸ್ಸನ್ನೇ ಮೀರಿಸುವಂಥಾ ಗೆಲುವು ಕೈ ಹಿಡಿಯಲಿರೋ ಸ್ಪಷ್ಟ ಸೂಚನೆಗಳೇ ಕಾಣಿಸುತ್ತಿವೆ. ನಿರ್ದೇಶಕರಾಗಿಯೇ ಹಿಡಿತ ಹೊಂದಿದ್ದ, ಅದನ್ನೇ ಕನಸಾಗಿಸಿಕೊಂಡಿದ್ದ ವೀರೇಂದ್ರ ಶೆಟ್ಟಿ ಹೀರೋ ಆಗಿದ್ದೇ ಆಕಸ್ಮಿಕ. ಬೇರೆಯವರಿಗಾಗಿ ಕಥೆ ಮಾಡಿಕೊಂಡು ಅಡ್ಡಾಡಿದ್ದ ಅವರು ಈ ಚಿತ್ರದ ನಾಯಕನ ಪಾತ್ರವನ್ನು ತಾನು ನಿರ್ವಹಿಸೋ ಛಾತಿ ಇದೆ ಎಂಬುದನ್ನು ಖಚಿತಪಡಿಸಿಕೊಂಡೇ ಹೀರೋ ಆಗಿ ಅವತರಿಸಿದ್ದಾರೆ. ನಿರ್ದೇಶಕನಾಗಿ ಗೆದ್ದಿರುವ ಅವರೀಗ ನಾಯಕನಾಗಿಯೂ ಅಭೂತಪೂರ್ವ ಗೆಲುವು ಕಾಣೋ ಲಕ್ಷಣಗಳೇ ದಟ್ಟವಾಗಿವೆ.