– `ಸಲಗ’ ಚಿತ್ರದ ಮುಹೂರ್ತದಲ್ಲಿ ಮಾಜಿ ಸಿಎಂ
ಬೆಂಗಳೂರು: ಸಿನಿಮಾಗಳಲ್ಲಿ ಸಂದೇಶ ಮತ್ತು ಮನೋರಂಜನೆ ಇರಬೇಕು. ಹಾಗೆಯೇ ಮೌಲ್ಯಗಳು ಇರಬೇಕಾಗುತ್ತದೆ. `ಸಲಗ’ ಚಿತ್ರದ ಕಥೆ ನನಗೆ ಗೊತ್ತಿಲ್ಲ. ಒಂಟಿ ಸಲಗ ಅಪಾಯಕಾರಿ. ಈ ಒಂಟಿ ಸಲಗ ಅಪಾಯಕಾರಿ ಆಗದಿರಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದ್ದಾರೆ.
ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊದಲು ಸಲಗ ಸಿನಿಮಾಗೆ ಶುಭಕೋರಿದರು. ಯಾವುದೇ ಸಿನಿಮಾದ ಸಕ್ಸಸ್ ನಿರ್ದೇಶಕನಿಗೆ ಮೊದಲು ಸೇರುತ್ತದೆ. ಆ ಬಳಿಕ ನಟ-ನಟಿ ಹಾಗೂ ಖಳನಾಯಕರು ಬರುತ್ತಾರೆ. ನಿರ್ದೇಶಕರು ಜನರ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಬೇಕು. ಸಮಾಜಕ್ಕೆ ಸಂದೇಶ ಸಾರುವಂತಹ ಸಿನಿಮಾಗಳು ಬರಬೇಕು. ಸಿನಿಮಾಗೆ ಮನೋರಂಜನೆಯೇ ಮುಖ್ಯವಲ್ಲ. ಆದರೆ ಜೊತೆಗೆ ನೀತಿಪಾಠ, ಸಾಮಾಜಿಕ ಮೌಲ್ಯ, ಬದುಕಿನ ಮೌಲ್ಯವಾಗುತ್ತದೆ ಎಂದು ಹೇಳಿದರು.
ವಿಜಿಯವರು ಒಂಟಿಸಲಗ ಸಿನಿಮಾದ ಕಥೆ ನನ್ನ ಬಳಿ ಹೇಳಿಲ್ಲ. ಆನೆ ನಡೆದಿದ್ದೇ ದಾರಿ. ಒಂಟಿ ಸಲಗನಾ-ಗುಂಪು ಸಲಗನಾ ನೋಡೋಣ. ಒಂಟಿ ಸಲಗ ಅಂದರೆ ಯಾವಾಗಲೂ ಅಪಾಯವಾಗಿರುತ್ತದೆ. ಆನೆಗಳು ಗುಂಪಿನಲ್ಲಿದ್ದರೆ ದಾರಿಯಲ್ಲಿ ಒಂದು ವೇಳೆ ಸಿಕ್ಕಿದರೂ ಏನು ಮಾಡಲ್ಲ. ಆದರೆ ಒಂಟಿ ಸಲಗಕ್ಕೆ ಭಯ, ಆತಂಕ ಎರಡೂ ಇರುತ್ತದೆ. ಒಂಟಿ ಸಲಗನೂ ಪರೋಪಕಾರಿಯಾಗಿ ಇರಲಿ ಎಂದು ಸಿದ್ದರಾಮಯ್ಯ ಆಶಿಸಿದರು.
ಈಗ ಸಿನಿಮಾ ನೋಡೋದನ್ನ ಕಡಿಮೆ ಮಾಡಿದ್ದೇನೆ. ಯಾಕಂದ್ರೆ ಇತ್ತೀಚೆಗೆ ಟೈಮ್ ಸಿಗೋದಿಲ್ಲ. ವಿದ್ಯಾರ್ಥಿಯಾಗಿದ್ದಾಗ ದಿನಕ್ಕೆ ಒಂದು ಸಿನಿಮಾ ನೋಡುತ್ತಿದ್ದೆ. ಹಿಂದೆ ಇದ್ದಂತಹ ಕಥೆ-ಮೌಲ್ಯ-ನೀತಿ ಸಂದೇಶ ಕಡಿಮೆಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಸಾಲೆ ಸಿನಿಮಾಗಳು ಜಾಸ್ತಿ ಬರುತ್ತಿವೆ. ಆದರೆ ಜಾಸ್ತಿ ದಿನ ಆ ಸಿನಿಮಾಗಳು ಓಡೋದಿಲ್ಲ. ಚಿತ್ರದಲ್ಲಿ ಒಂದೊಳ್ಳೆ ಕಥೆ-ಸಂದೇಶ ಹಾಗೂ ನಟ-ನಟಿಯರು ಅಭಿನಯ ಚೆನ್ನಾಗಿ ಮಾಡಿದರೆ ಮಾತ್ರ ಸಿನಿಮಾ ಓಡುತ್ತದೆ. ವಿಜಿ ಒಳ್ಳೆಯ ನಟ. ವಿಜಯ್ ಅಭಿನಯದ ಒಂದೆರಡು ಸಿನಿಮಾ ನೋಡಿದ್ದೇನೆ. ನಿರ್ದೇಶನದಲ್ಲೂ ವಿಜಿಗೆ ಯಶಸ್ಸು ಸಿಗಲಿ. ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಈ ಚಿತ್ರದ ಮುಹೂರ್ತ ನಡೆದಿದೆ. ಆ ತಾಯಿಯ ಆಶೀರ್ವಾದ ತಂಡದ ಮೇಲಿರಲಿ ಎಂದು ಅವರು ತಿಳಿಸಿದರು.
ಮೈಲಾರಿ ಹಾಗೂ ಟಗರು ನಂತರ ಒಂಟಿ ಸಲಗಕ್ಕೆ ಸಿದ್ದರಾಮಯ್ಯ ಫಸ್ಟ್ ಕ್ಲಾಪ್ ಹಾಕಿ ನಂತರ ನಿರ್ಮಾಪಕ ಶ್ರೀಕಾಂತ್ಗೆ ಶುಭಕೋರಿದರು. ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿ ಮಹಾ ಕಾಳಮ್ಮ ದೇವಸ್ಥಾನದಲ್ಲಿ ಇಂದು ನಡೆಯಿತು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕಿಚ್ಚ ಸುದೀಪ್, ರಾಘವೇಂದ್ರ ರಾಜ್ಕುಮಾರ್, ಸಂಸದ ಡಿಕೆ ಸುರೇಶ್ ಶುಭ ಹಾರೈಸಿದ್ರು.