ನೆಲಮಂಗಲ: ಹಗಲಿನ ವೇಳೆಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಖದೀಮರನ್ನು ಬೆಂಗಳೂರು ಹೊರವಲಯ ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಸುಮಾರು 23.50 ಲಕ್ಷ ರೂ. ಮೌಲ್ಯದ 578 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರಾದ ವಿಶ್ವನಾಥ್ ಮತ್ತು ಹನುಮಂತರಾಜು ತಮ್ಮ ಸಂಬಂಧಿಗಳ ಮನೆಯನ್ನ ಟಾರ್ಗೆಟ್ ಮಾಡಿ ಯಾವುದೇ ಅನುಮಾನ ಬರದ ಹಾಗೆ ಸುಮಾರು ಒಂದೂವರೆ ವರ್ಷಗಳಿಂದ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕಳ್ಳತನ ಮಾಡುತ್ತಿದ್ದ ಬೆಲೆಬಾಳುವ ಆಭರಣಗಳನ್ನು ಆಟಿಕಾ ಗೋಲ್ಡ್ ಮತ್ತು ಮಣಪ್ಪುರಂ ಫೈನಾನ್ಸ್ ನಲ್ಲಿ ಗಿರವಿ ಇಡುತ್ತಿದ್ದರು ಎಂದು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಅಧೀಕ್ಷಕರಾದ ಸಜೀತ್ ತಿಳಿಸಿದ್ದಾರೆ.
ಆರೋಪಿಗಳು ತಮ್ಮ ಚಾಣಾಕ್ಷತನದಿಂದ ಯಾವುದೇ ಕುರುಹುಗಳು ಸಿಗದಂತೆ ಹಾಗೂ ಯಾರಿಗೂ ಯಾವ ರೀತಿಯಲ್ಲಿ ಅನುಮಾನ ಬರದ ರೀತಿಯಲ್ಲಿ ತಮ್ಮ ಕೈಕೆಲಸ ಮಾಡುವ ಆಸಾಮಿಗಳು. ಒಂದನೇ ಆರೋಪಿ ವಿಶ್ವನಾಥ್ ಇದೇ 17ರಂದು ನೆಲಮಂಗಲದ ದಾದಾಪೀರ್ ಬಡಾವಣೆಯ ಸಮೀರ್ ಎಂಬವರ ಮನೆಯಲ್ಲಿ ನಕಲಿ ಕೀ ಬಳಸಿ, ಮನೆಯಲ್ಲಿ ಇದ್ದ 463 ಗ್ರಾಂ ಚಿನ್ನಾಭರಣವನ್ನ ಕದ್ದು ನಾಪತ್ತೆಯಾಗಿದ್ದ.
ಎರಡನೇ ಆರೋಪಿ ಹನುಮಂತರಾಜು ದಾನೋಜಿಪಾಳ್ಯದ ಸಂಬಂಧಿಕರ ಮನೆಯಲ್ಲಿ 115 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಟೌನ್ ಪಿಎಸ್ಐ ಮಂಜುನಾಥ್ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.