ಬೆಂಗಳೂರು: ನನ್ನ ಕೆಣಕಿದರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ. ಮಲಗಿರೋ ಹಾವನ್ನು ಕೆಣಕಿದರೆ ಕಚ್ಚೋದು ಗ್ಯಾರಂಟಿ ಎಂದು ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗುಡುಗಿದ್ದಾರೆ.
ತನ್ನ ಜನ್ಮದಿನ ಪ್ರಯುಕ್ತ ಮಹಿಳೆಯರಿಗೆ ಸೀರೆ ಹಂಚುತ್ತಿರುವ ಎಂಟಿಬಿ ನಾಗರಾಜ್ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಯಾರಿಗೂ ಭಯ ಬೀಳಲ್ಲ, ದೇವರಿಗೆ ಮತ್ತು ಮತದಾರರಿಗೆ ಮಾತ್ರ ಭಯ ಬೀಳುತ್ತೇನೆ ಎಂದು ಹೇಳಿದರು.
5 ರಿಂದ 10 ಬಾರಿ ಮಂತ್ರಿ ಆಗಿ ಲೂಟಿ ಹೊಡೆದಿರುವ ದಾಖಲೆ ನನ್ನ ಹತ್ತಿರ ಇದೆ. ಅಧಿಕಾರವಿದ್ದಾಗ ಎಷ್ಟು ಆಸ್ತಿ ಮಾಡಿದ್ದೀರಿ ಎಂಬ ದಾಖಲೆ ಕೂಡ ಇದೆ. ನನ್ನ ಬಗ್ಗೆ ದಾಖಲೆ ಇದ್ದರೆ ಮಾಧ್ಯಮಗಳ ಮುಂದೆ ತಗೊಂಡು ಬನ್ನಿ. ಐಟಿ ಅಧಿಕಾರಿಗಳಿಗೆ ಮತ್ತು ಮೀಡಿಯಾಗೆ ಭಯ ಬಿದ್ದು ಎಂಟಿಬಿ ರಾಜೀನಾಮೆ ಕೊಟ್ಟ ಎನ್ನುತ್ತಾರೆ. ಆದರೆ ನಾನು ಯಾರಿಗೂ ಭಯ ಬೀಳಲ್ಲ, ದೇವರು ಮತ್ತು ಮತದಾರರಿಗೆ ಮಾತ್ರ ಭಯ ಬೀಳುತ್ತೇನೆ ಎಂದು ತಿಳಿಸಿದರು.
30 ಕೋಟಿ ತಗೊಂಡು ಬಿಜೆಪಿಗೆ ಹೋದ, ಮಗನ ಉದ್ಧಾರ ಮಾಡೋಕೆ ಹೋದ ಎಂದು ದೊಡ್ಡ ದೊಡ್ಡ ನಾಯಕರು ಹೇಳುತ್ತಾರೆ. ಆದರೆ ನಾನು ಆ ದೊಡ್ಡ ನಾಯಕರ ಕಥೆ ತೆಗೆದರೆ ಅವರ ಕಥೆ ಮುಗಿಯುತ್ತೆ. ನಾನು ಯಾವ ಪುರುಷಾರ್ಥಕ್ಕೆ ಸುಳ್ಳು ಹೇಳಬೇಕು. ನನಗೆ ರಾಜಕೀಯದಿಂದ ಬೇಸರ ಆಗಿದೆ. ಕಳಪೆ, ಕಲ್ಮಶ ಮತ್ತು ಸುಳ್ಳು ರಾಜಕೀಯದಿಂದ ಬೇಸತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.