ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿಯವರ ಒತ್ತಾಯದ ಮೇರೆಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ರಾಮ್ ಚರಣ್ ಅವರ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಚಿರಂಜೀವಿ ಅಭಿನಯಿಸುತ್ತಿರುವ ಅವರ ಮುಂದಿನ ಚಿತ್ರ ‘ಆಚಾರ್ಯ’ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಕೃಷ್ಣ ಸುಂದರಿ ತ್ರಿಶಾ ಸಿನಿಮಾದಿಂದ ಹೊರಬಂದಿದ್ದರು. ಈಗ ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿರುವ ಚಿತ್ರತಂಡದಿಂದ ರಶ್ಮಿಕಾ ಅವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಆಚಾರ್ಯ ಚಿತ್ರದಲ್ಲಿ ಚಿರಂಜೀವಿ ಜೊತೆ ಅವರ ಪುತ್ರ ರಾಮ್ ಚರಣ್ ಕೂಡ ಅಭಿನಯಿಸುತ್ತಿದ್ದಾರೆ. ಈ ವೇಳೆ ರಾಮ್ ಚರಣ್ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಟಾಲಿವುಡ್ನಲ್ಲಿ ಹಿಟ್ ಸಿನಿಮಾ ಮಾಡಿ ಗುರುತಿಸಿಕೊಂಡಿರುವ ರಶ್ಮಿಕಾ ಆ್ಯಕ್ಟಿಂಗ್ ನೋಡಿ ಮೆಗಾಸ್ಟಾರ್ ಚಿರು ಫಿದಾ ಆಗಿದ್ದಾರಂತೆ. ಅದಕ್ಕಾಗಿಯೇ ಈ ಪಾತ್ರಕ್ಕೆ ರಶ್ಮಿಕಾ ಅವರೇ ಸೂಕ್ತ ಎಂದು ಚಿರು ಚಿತ್ರದ ನಿರ್ದೇಶಕರಿಗೆ ಹೇಳಿದ್ದಾರೆ.
ಸಿನಿಮಾದ ಮೊದಲು ರಾಮ್ ಚರಣ್ ಜೊತೆ ಅವರು ಆತ್ಮೀಯ ಗೆಳತಿ ಕಿಯಾರಾ ಅದ್ವಾಣಿಯವರು ಅಭಿನಯಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗೆ ಚಿರಂಜೀವಿ ಅವರು ಈ ಪಾತ್ರವನ್ನು ರಶ್ಮಿಕಾ ಅವರೇ ಮಾಡಬೇಕು ಎಂದು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಒತ್ತಾಯ ಮಾಡಿದ್ದರಂತೆ. ಆದ್ದರಿಂದ ಚಿರಂಜೀವಿ ಒತ್ತಾಯದ ಮೇರೆಗೆ ರಶ್ಮಿಕಾ ರಾಮ್ ಚರಣ್ ಜೊತೆ ಆಚಾರ್ಯ ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಆಚಾರ್ಯ ಚಿತ್ರದಲ್ಲಿ ರಾಮ್ ಚರಣ್ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇತ್ತೀಚೆಗೆ ತ್ರಿಶಾ ಅವರು ಈ ಚಿತ್ರದಿಂದ ಹೊರಬಂದಿದ್ದು, ಇವರ ಜಾಗಕ್ಕೆ ಕಾಜಲ್ ಅಗರವಾಲ್ ಅವರು ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಚಿತ್ರದ ನಿರ್ದೇಶಕರು ಮೊತ್ತೋರ್ವ ಕನ್ನಡತಿ ಅನುಷ್ಕಾ ಶೆಟ್ಟಿಯವರನ್ನು ಚಿತ್ರದ ನಾಯಕಿಯಾಗಿ ಮಾಡಲು ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚಿತ್ರದಿಂದ ಹೊರ ಬಂದು ಈ ವಿಚಾರವಾಗಿ ಟ್ವೀಟ್ ಮಾಡಿದ್ದ ತ್ರಿಶಾ, ಕೆಲವೊಂದು ವಿಚಾರಗಳು ನಾವು ಮೊದಲೇ ಚರ್ಚಿಸಿದಂತೆ ಆಗಲ್ಲ. ಸಣ್ಣ ಭಿನ್ನಾಭಿಪ್ರಾಯಗಳಿಂದ ಚಿರಂಜೀವಿ ಸರ್ ಸಿನಿಮಾದಿಂದ ಹೊರಬರಲು ನಿರ್ಧರಿಸಿದ್ದೇನೆ. ಆದರೆ ಆದಷ್ಟು ಬೇಗ ನೂತನ ಪ್ರಾಜೆಕ್ಟ್ ನೊಂದಿಗೆ ಮತ್ತೆ ನಿಮ್ಮ ಮುಂದೆ ಬರುವುದಾಗಿ ತಿಳಿಸಿದ್ದರು. ಅಲ್ಲದೆ ಚಿತ್ರ ತಂಡಕ್ಕೆ ಶುಭಾಶಯ ಕೋರಿದ್ದರು.