ಬೆಂಗಳೂರು: ನಮಗೆ ಗಂಟಲು ದ್ರವದ ಪರೀಕ್ಷೆಯನ್ನು ರಾಜಸ್ಥಾನ ಸರ್ಕಾರ ಮಾಡಿಲ್ಲ ಎಂದು ಅಜ್ಮೀರ್ ದರ್ಗಾಕ್ಕೆ ಹೋಗಿದ್ದ ಯಾತ್ರಿ ದಾವಲ್ ಅವರು ಹೇಳಿದ್ದಾರೆ.
ರಾಜಸ್ಥಾನದ ಅಜ್ಮೀರ್ನಲ್ಲಿರುವ ದರ್ಗಾಕ್ಕೆ ಹೋಗಿ ರಾಜ್ಯಕ್ಕೆ ವಾಪಸ್ ಅದ ಸುಮಾರು 38 ಜನರ ಪೈಕಿ 31 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಈ ಯಾತ್ರಿಗಳ ಗಂಟಲು ದ್ರವನ್ನು ಪರೀಕ್ಷೆ ಮಾಡದೇ ಕೇವಲ ಬ್ಲಡ್ ಟೆಸ್ಟ್ ಮಾಡಿ ರಾಜಸ್ಥಾನ ಸರ್ಕಾರ ನೆಗೆಟಿವ್ ಎಂದು ರೀಪೋರ್ಟ್ ನೀಡಿರುವ ಭಯಾನಕ ವಿಚಾರ ತಿಳಿದು ಬಂದಿದೆ.
ಈ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ದಾವಲ್ ಅವರು, ನಾವು 38 ಮಂದಿ ಒಟ್ಟಿಗೆ ಮಾರ್ಚ್ 19 ರಂದು ಅಜ್ಮೀರ್ ಗೆ ಹೋಗಿದ್ದೇವು. ಜೊತೆಗೆ ನಾವು ಮಾರ್ಚ್ 22ರಂದು ವಾಪಸ್ ಬರಬೇಕಿತ್ತು. ಆದರೆ ಲಾಕ್ಡೌನ್ ಆದ ಕಾರಣ ಅಲ್ಲೇ ಸಿಕ್ಕಿ ಹಾಕಿಕೊಂಡಿವೆ. ಆ ದರ್ಗಾಗೆ ವಿವಿಧ ರಾಜ್ಯದ ಸುಮಾರು 4 ಸಾವಿರ ಮಂದಿ ಬಂದಿದ್ದರು. ನಮ್ಮ ರಾಜ್ಯದಿಂದಲೂ ಸುಮಾರು 400 ರಿಂದ 500 ಜನ ಹೋಗಿದ್ದೇವು ಎಂದು ಹೇಳಿದ್ದಾರೆ.
ಲಾಕ್ಡೌನ್ ಆದ ನಂತರ ನಾವು ಅಲ್ಲೇ ಉಳಿದಿದ್ದೇವು. ರಾಜಸ್ಥಾನದಲ್ಲಿ ಆ ಜಿಲ್ಲೆಯ ಜಿಲ್ಲಾಧಿಕಾರಿಗಳು ನಮ್ಮನ್ನು ಪರೀಕ್ಷೆ ಮಾಡಿದರು. ಥರ್ಮಲ್ ಟೆಸ್ಟ್ ಮತ್ತು ಬ್ಲಡ್ ಪರೀಕ್ಷೆ ಮಾಡಿದರು. ಗಂಟಲು ದ್ರವದ ಪರೀಕ್ಷೆ ಮಾಡಲಿಲ್ಲ. ನಂತರ ನಮಗೆ ವರದಿ ನೀಡಿದ್ದು, ನಮ್ಮೆಲ್ಲರ ವರದಿ ನೆಗೆಟಿವ್ ಬಂದಿತ್ತು. ಹೀಗಾಗಿ ನಾವು ನಮ್ಮ ಸ್ವಂತ ಹಣದಿಂದ ಬಸ್ಸನ್ನು ಮಾಡಿಕೊಂಡು ರಾಜ್ಯಕ್ಕೆ ವಾಪಸ್ ಬಂದಿದ್ದೇವೆ ಎಂದು ದಾವಲ್ ತಿಳಿಸಿದ್ದಾರೆ.
ನಾವು ರಾಜಸ್ಥಾನದಿಂದ ಬರುವಾಗ ಮಧ್ಯೆ ಎಲ್ಲಿಯೂ ಕೆಳಗೆ ಇಳಿದಿಲ್ಲ. ನೇರವಾಗಿ ರಾಜ್ಯಕ್ಕೆ ಬಂದಿದ್ದೇವೆ. ಅಲ್ಲಿಂದ ನಮ್ಮನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಈ ನಡುವೆ ನಮಗೆ ಕೊರೊನಾ ಹೇಗೆ ಬಂತು ಎಂದು ಗೊತ್ತಿಲ್ಲ. ಕರ್ನಾಟಕಕ್ಕೆ ಬಂದ ನಂತರ ನಮ್ಮ ಗಂಟಲು ದ್ರವವನ್ನು ಪರೀಕ್ಷೆ ಮಾಡಲಾಯಿತು. ಆದರೆ ರಾಜಸ್ಥಾನದಲ್ಲಿ ಮಾಡಿರಲಿಲ್ಲ. ಈ ಕಾರಣದಿಂದ ಬಂದಿರಬಹುದು ಎಂದು ದಾವಲ್ ಒಪ್ಪಿಕೊಂಡಿದ್ದಾರೆ.