ಬೆಂಗಳೂರು: ಇಂದು ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರು ಪಟ್ಟ ಪಾಡು ಯಾರಿಗೂ ಬೇಡ. 1 ಕಿಲೋಮೀಟರ್ ಸಾಗುವುದಕ್ಕೆ ಅರ್ಧ ಗಂಟೆಗೂ ಹೆಚ್ಚುಕಾಲ ಬೇಕಾಗಿತ್ತು. ಯಾಕೆಂದರೆ ಇಂದು ಸಿಲಿಕಾನ್ ಸಿಟಿಯ ರೋಡುಗಳಲ್ಲಿ ಪ್ರತಿಭಟನೆಯ ಜನರೇ ಕಾಣುತ್ತಿದ್ದರು.
ಹೌದು, ಇಂದು ಬೆಂಗಳೂರಿನಲ್ಲಿ ಪ್ರತಿಭಟನೆಯ ಅಬ್ಬರ ಜೋರಾಗಿತ್ತು. ಸಿಲಿಕಾನ್ ಸಿಟಿಯ ಹೃದಯ ಭಾಗವಾದ ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ರು. ಜೊತೆಗೆ ಸಿಟಿ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕಿನವರೆಗೆ ಪ್ರತಿಭಟನಾ ರ್ಯಾಲಿ ಮಾಡಿದರು.
ಇದರಿಂದ ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಮೈಸೂರು ಬ್ಯಾಂಕ್ ವೃತ್ತ, ಕೆಆರ್ ಸರ್ಕಲ್ ಸೇರಿದಂತೆ ಸುತ್ತಮುತ್ತಲಿನ ರೋಡ್ ಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಯಾವಾಗಪ್ಪ ಕೆಲಸಕ್ಕೆ ಹೋಗೊದು? ಟ್ರಾಫಿಕ್ ಕ್ಲೀಯರ್ ಆಗೋದು ಯಾವಾಗ ಎಂದು ಕಾಯುವಂತಾಗಿತ್ತು. ಇನ್ನೊಂದು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಗಾಗಿ ಹೆಬ್ಬಾಳ ರೋಡ್ ಬಂದ್ ಮಾಡಿದ್ದರು. ಪ್ರಧಾನಿ ಮೋದಿ ಸಂಚಾರ ಮಾಡೋದಕ್ಕಾಗಿ 30 ನಿಮಿಷಗಳ ಕಾಲ ರೋಡ್ ಬಂದ್ ಮಾಡಿದ್ದ ಪೊಲೀಸರ ವಿರುದ್ಧ ವಾಹನ ಸವಾರರು ಅಕ್ರೋಶಗೊಂಡು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಮಧ್ಯಾಹ್ನ ಮೈಸೂರ್ ರೋಡ್ ನಲ್ಲಿರೋ ಗೋರಿಪಾಳ್ಯ ರಸ್ತೆಯ ಪಕ್ಕದ ಈದ್ಗಾ ಮೈದಾನದಲ್ಲಿ ಸಿಎಎ ಮತ್ತು ಎನ್.ಸಿ.ಆರ್ ವಿರುದ್ಧ ಪ್ರತಿಭಟನಾ ಸಮಾವೇಶಕ್ಕೆ 10 ಸಾವಿರ ಜನಸೇರಿದ್ರು. ಇದರಿಂದ ಮೈಸೂರು ರೋಡ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರಧಾನಿ ಮೋದಿಯ ಕಾರ್ಯಕ್ರಮ ಒಂದು ಕಡೆ, ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ್ಯಾಲಿ, ಹಾಗೂ ಸಿಎಎ ವಿರುದ್ಧದ ಸಮಾವೇಶದಿಂದ ನಗರ ಪೊಲೀಸರು ಹೈರಾಣಾಗಿ ಹೋದರು.
ಒಟ್ಟಿನಲ್ಲಿ ನಗರದ ಮೂರು ಭಾಗಗಳಲ್ಲಿ ಆದ ಬೆಳವಣಿಗೆಯಿಂದ ವಾಹನ ಸವಾರರು ಮಾತ್ರ ಸಾಕಪ್ಪ ಸಿಲಿಕಾನ್ ಸಿಟಿಯ ಟ್ರಾಫಿಕ್ ಸಹವಾಸ ಎಂದು ರಸ್ತೆಯಲ್ಲೇ ಗಂಟೆಗಟ್ಟಲೇ ಸಮಯ ಕಳೆಯಬೇಕಾಯಿತು. ಇದರಿಂದ ಕೆಲಸಕ್ಕೆ ಹೊರಟ್ಟಿದ ಸಿಲಿಕಾನ್ ಸಿಟಿ ಮಂದಿ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತುಹೋದರು.