ಬೆಂಗ್ಳೂರಿಗರಿಗೆ ಶೀಘ್ರದಲ್ಲೇ ಡಬಲ್ ಬೆಲೆಯೇರಿಕೆ ಬರೆ

Public TV
1 Min Read
Bengaluru

ಬೆಂಗಳೂರು: ರಾಜ್ಯ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಬೆಲೆ ಏರಿಕೆ ಬಿಸಿ ಶೀಘ್ರವೇ ತಟ್ಟಲಿದೆ. ಬಸ್ ಟಿಕೆಟ್ ದರ ಏರಿಕೆ ಹಾಗೂ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಏರಿಕೆಯ ಚಿಂತನೆ ಜೋರಾಗಿಯೇ ನಡೆಯುತ್ತಿದೆ.

ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಬೆಲೆಯೇರಿಕೆಯ ಬಿಸಿ ತಡೆದುಕೊಳ್ಳುವ ಮುನ್ನವೇ ಪಾಲಿಕೆಯು ಬೆಂಗಳೂರು ವ್ಯಾಪ್ತಿಯ ಆಸ್ತಿಗಳ ತೆರಿಗೆ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಕಳೆದ 3 ವರ್ಷಗಳಿಂದ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಆಗಿರಲಿಲ್ಲ. ಕೆಎಂಸಿ ನಿಯಮದ ಪ್ರಕಾರ ಶೇ.20 ರಿಂದ 25 ರಷ್ಟು ಆಸ್ತಿ ತೆರಿಗೆ ಹೆಚ್ಚಳದ ಅಗತ್ಯವಿದೆ ಎಂದು ಅಧಿಕಾರಿಗಳು ಪಾಲಿಕೆ ಕೌನ್ಸಿಲ್ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ.

BBMP Gangambike

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮೇಯರ್ ಗಂಗಾಬಿಕೆ ಅವರು, ಪಕ್ಷಾತೀತವಾಗಿ ಒಪ್ಪಿದರೆ ಮಾತ್ರ ಆಸ್ತಿ ತೆರಿಗೆ ಪರಿಷ್ಕರಣೆ ಬಗ್ಗೆ ಆಲೋಚನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಾರಿಗೆ ಇಲಾಖೆ ನಷ್ಟದಲ್ಲಿ ಎಂಬ ಕಾರಣಕ್ಕೆ ಶೇ.18ರಷ್ಟು ಟಿಕೆಟ್ ದರ ಏರಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ತಲುಪಿದೆ. ಈ ಸತ್ಯವನ್ನು ಖುದ್ದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಬಿಚ್ಚಿಟ್ಟಿದ್ದಾರೆ.

BUS D.C.Thammanna

ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಸಚಿವರು, ಮೂಲಭೂತ ಸೌಕರ್ಯ ಹಾಗೂ ತೈಲ ರಿಯಾಯಿತಿ ಕೊಟ್ಟರೆ ಸಂಸ್ಥೆ ನಡೆಸಬಹುದು. ಇಲ್ಲದಿದ್ದರೆ ಕನಿಷ್ಠ ಸರ್ಕಾರ ಅನುದಾನವನ್ನಾದರೂ ನೀಡಲೇ ಬೇಕು. ಇದು ಯಾವುದು ಆಗದಿದ್ದರೆ ಇದೇ ತಿಂಗಳು 12ರಂದು ನಡೆಯುವ ಸಭೆಯಲ್ಲಿ ಬಸ್ ಪ್ರಯಾಣ ದರ ಶೇ.18 ರಷ್ಟು ಏರಿಕೆ ಮಾಡಲಾಗುವುದು ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *