ಬೆಂಗಳೂರು: ದಿನಬಳಕೆ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಆಹಾರ ಮತ್ತು ಈರುಳ್ಳಿ ದರ ಏರಿಕೆ ಖಂಡಿಸಿ, ವಿನೂತನವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಿ, ಮಲ್ಲೇಶ್ವರಂ ಕುವೆಂಪು ಪ್ರತಿಮೆ ಬಳಿ ಮಹಿಳೆಯರು ಪ್ರತಿಭಟನೆ ಮಾಡಿದರು.
ಬೆಂಗಳೂರು ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಶ್ರೀಮತಿ ವಿಮಲ ವೆಂಕಟ್ ರವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ವಧಿಕಾರಿ ಧೋರಣೆ ಇಂದ ದೇಶ ಸಂಕಷ್ಟದ ಪರಿಸ್ಥಿತಿ ಬಂದಿದೆ. ನೋಟು ಅಮ್ಯಾನೀಕರಣ, ಅವೈಜ್ಞಾನಿಕ ಜಿ.ಎಸ್.ಟಿ ಮತ್ತು ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ರೈತರ ಸಂಕಷ್ಟಗಳನ್ನು ಕೇಳುವವರು ಇಲ್ಲದಂತಾಗಿದೆ. ಸಿ.ಎ.ಎ ಮತ್ತು ಎನ್.ಆರ್.ಸಿ ಕಾನೂನು ಗೊಂದಲದಲ್ಲಿ ಇದ್ದು ದೇಶದ ಜನರು ಭಯದ ವಾತವರಣದಲ್ಲಿ ಇದ್ದಾರೆ ಎಂದರು.
ಕರ್ನಾಟಕ ರಾಜ್ಯದಲ್ಲಿ 18 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಪ್ರವಾಹದಿಂದ ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ. ಕೋಟ್ಯಂತರ ರೂಪಾಯಿ ರೈತನ ಬೆಳೆ ಹಾನಿಯಾದರು ಬಿಜೆಪಿ ಕೇಂದ್ರ ಸರ್ಕಾರ ಹೆಚ್ಚು ಪರಿಹಾರ ಕೊಡುವಲ್ಲಿ ವಿಫಲವಾಗಿದೆ. ಭಾರತದ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿದೆ. ಉದ್ಯೋಗ ಸೃಷ್ಟಿ ಗಗನಕುಸಮವಾಗಿದೆ. ಯುವಕರು ಕಂಗಾಲಾಗಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಮುಂದಿನ ದಿನಗಳಲ್ಲಿ ಇದೇ ರೀತಿ ಆದರೆ ಬಡ ಜನರು ಬದುಕೋದೆ ಕಷ್ಟವಾಗುತ್ತದೆ. ಕೂಡಲೇ ಅರ್ಥಿಕ ಸುಸ್ಥಿರತೆ ಕಾಪಾಡುವ ಕೆಲಸ ಆಗಬೇಕು. ಏರುತ್ತಿರುವ ದಿನಬಳಕೆ ವಸ್ತುಗಳ ದರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ವಿಮಲ ವೆಂಕಟ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಉಮಾಬಾಯಿ, ಆಶಾ ರಾಜು, ಮಹಿಳಾ ಬ್ಲಾಕ್ ಅಧ್ಯಕ್ಷರುಗಳಾದ ಪಾರ್ವತಿ, ಸುಶೀಲ, ಅನಿತಾ, ಭವ್ಯ, ಚಂದ್ರಮ್ಮ ನೂರಾರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.