ಬಂಧಿತ, ಗಾಯಗೊಂಡ ಆರೋಪಿಗಳಿಗೆ ಚಿಕಿತ್ಸೆ ಕಡ್ಡಾಯ: ಪೊಲೀಸ್ ಇಲಾಖೆ

Public TV
1 Min Read
hospital bed
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಂಧಿತ ಆರೋಪಿಗಳು ಮತ್ತು ಗಾಯಗೊಂಡ ಆರೋಪಿಗಳಿಗೆ ಕಡ್ಡಾಯವಾಗಿ ತಪ್ಪದೆ ಠಾಣಾಧಿಕಾರಿಗಳು ವೈದ್ಯಕೀಯ ತಪಾಸಣೆ ಮಾಡಿಸಬೇಕು ಅಂತ ಪೊಲೀಸ್ ಮಹಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಶಿಫಾರಸು ಮೇಲೆ ಪೊಲೀಸ್ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದೆ. ಅಲ್ಲದೆ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.

ವಿಚಾರಣಾಧೀನ ಕೈದಿ ಸಂಜು ಸಂಜೀವ್ ಕುಮಾರ್ ಅಸಹಜ ಸಾವಿನ ಪ್ರಕರಣದಿಂದ ಈ ಮಹತ್ವದ ಸುತ್ತೋಲೆ ಇಲಾಖೆ ಹೊರಡಿಸಿದೆ. ಅಪರಾಧ ಪ್ರಕರಣದಲ್ಲಿ ಅಥವಾ ಇತರೆ ಸಂದರ್ಭಗಳಲ್ಲಿ ಬಂಧಿತ ಆರೋಪಿಗಳಿಗೆ ಯಾವ ಯಾವ ನಿಯಮ ಪಾಲನೆ ಮಾಡಬೇಕು ಅಂತ ಸುಪ್ರೀಂಕೋರ್ಟ್ ಡಿಕೆ ಬಸು ವಿರುದ್ಧ ಪಶ್ಚಿಮ ಬಂಗಾಳ ರಾಜ್ಯದ ಪ್ರಕರಣದಲ್ಲಿ 11 ಅಂಶಗಳ ಕಾರ್ಯಸೂಚಿಯನ್ನು ನೀಡಿದೆ. ಈ ಮಾರ್ಗಸೂಚಿಯನ್ನ ಕಟ್ಟು ನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಎಲ್ಲಾ ಠಾಣೆಗಳಿಗೆ ಸೂಚನೆ ನೀಡಿದೆ.

hospital bed reuters

ಬಂಧಿತ ಆರೋಪಿಗೆ ವೈದ್ಯಕೀಯ ಚಿಕಿತ್ಸೆ ಅಥವಾ ಪರೀಕ್ಷೆ ಒಳಪಡಿಸುವ ಕುರಿತಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿ 8 ನೇ ಅಂಶದಲ್ಲಿ ಸೂಚನೆ ನೀಡಲಾಗಿದೆ. ಈ ಮಾರ್ಗಸೂಚಿ ಅನ್ವಯ ಬಂಧಿತ ಆರೋಪಿಗೆ ಪ್ರತಿ 48 ಗಂಟೆಗೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಸಬೇಕು ಅಂತ ಸೂಚನೆ ನೀಡಲಾಗಿದೆ. ಈ ಆದೇಶ ಪಾಲಿಸುವಂತೆ ಇಲಾಖೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಬಂಧಿತ ಆರೋಪಿಯನ್ನ ಬಂಧನದ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ಆರೋಪಿ ಪರೀಕ್ಷೆಗೆ ಪೊಲೀಸರು ಮೊದಲ ಆದ್ಯತೆ ಕೊಡಬೇಕು. ಬಂಧಿತ ಆರೋಪಿ ಆರೋಗ್ಯ ಸ್ಥಿತಿ ವಿಷಮಿಸದಂತೆ ಅಗತ್ಯ ಕ್ರಮವಹಿಸಬೇಕು ಅಂತ ಇಲಾಖೆ ಸುತ್ತೋಲೆಯ ಉಲ್ಲೇಖ ಮಾಡಿದೆ. ಯಾವುದೇ ಠಾಣೆಗಳು ಮಾರ್ಗಸೂಚಿ ಪಾಲನೆ ಮಾಡದೇ ಇದ್ದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ.

Supreme Court

Share This Article
Leave a Comment

Leave a Reply

Your email address will not be published. Required fields are marked *