ಬೆಂಗಳೂರು: ಇತ್ತೀಚೆಗೆ ಪೊಲೀಸರ ಹಾವಳಿ ಜಾಸ್ತಿಯಾಗುತ್ತಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿತ್ತಿದ್ದ ವೇಳೆ ಟ್ರಾಫಿಕ್ ರೂಲ್ಸ್ ಹಾಗೂ ರಸ್ತೆ ದುರಸ್ತಿ ಬಗ್ಗೆ ಪಬ್ಲಿಕ್ ಟಿವಿ ವರದಿಗಾರ ಸಚಿವರನ್ನು ಪ್ರಶ್ನಿಸಿದಾಗ, ನಾವು ಕೂಡ ಸಾರ್ವಜನಿಕರಾಗಿದ್ದು, ಹಲವು ಕಡೆ ನೋಡುತ್ತಾ ಇರುತ್ತೇವೆ. ಎಲ್ಲಿ ಬೇಕಂದರಲ್ಲಿ ಮೋಟಾರ್ ಬೈಕ್ ಗಳನ್ನು ಪೊಲೀಸರು ಹಿಡಿಯುತ್ತಾ ಇರುತ್ತಾರೆ. ಆದರೆ ಪೊಲೀಸರು ಹಿಡಿಯಬಾರದು ಎಂದು ಹೇಳುತ್ತಿಲ್ಲ ಎಂದರು.
ಪೊಲೀಸರ ಈ ಕ್ರಮದಿಂದ ಬಹಳಷ್ಟು ಪ್ರಯಾಣಿಕರಿಗೆ ಇರುಸು-ಮುರುಸು ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.
ಇತ್ತೀಚೆಗೆ ಪೊಲೀಸರ ಹಾವಳಿ ಕೂಡ ಜಾಸ್ತಿ ಆಗುತ್ತಿದೆ. ಗೃಹಿಣಿಯರು ಅಲ್ಲದೆ ಪಾಪ ಬಡತನದಲ್ಲಿದ್ದವರು ಹೋಗುತ್ತಿರುತ್ತಾರೆ. ಒಂದು ಸರ್ಕಲ್ ನಿಂದ ಇನ್ನೊಂದು ಸರ್ಕಲ್ ವರೆಗೆ ಹೋಗಬೇಕಾದರೆ ಸುಮಾರು 5 ಮಂದಿ ಪೊಲೀಸರು ನಿಂತಿರುತ್ತಾರೆ. ಒಂದು ಪಾಸ್ ಪಾಸಾದರೆ ಒಂದು ಹಿಡಿದುಕೊಳ್ಳಬೇಕೆಂದು ಅವರು ಈ ರೀತಿ ನಿಂತಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.
ಪೊಲೀಸರು ಏನ್ ಕೇಸ್ ಹಾಕಿಕೊಳ್ಳಬೇಕು ಎಂಬ ನಿಯಮ ಮಾಡಿಕೊಂಡಿರುವುದನ್ನು ನಾನು ವಿರೋಧಿಸಲ್ಲ. ಜನ ನೋವು ಅನುಭವಿಸುತ್ತಿದ್ದಾರೆ. ಹೀಗಾಗಿ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.