ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟನೆಗಳು ಹಾಗೂ ಬಂದೋಬಸ್ತ್ ಒತ್ತಡದಿಂದಾಗಿ ಬೆಂಗಳೂರು ಪೊಲೀಸರು ಹೈರಾಣಾಗಿದ್ದಾರೆ. ಕಳೆದ ಐದು ದಿನದಿಂದ ಹಗಲಿರುಳು ಕೆಲಸ ಮಾಡಿ ರೋಸಿ ಹೋಗಿದ್ದಾರೆ.
ಡಿ.30 ರಿಂದ ಇಲ್ಲಿಯ ತನಕ ನಿರಂತರವಾಗಿ ಕೆಲಸ ಮಾಡುತ್ತಿರುವ ಪೊಲೀಸರು ದೈಹಿಕವಾಗಿ, ಮಾನಸಿಕವಾಗಿ ಹಿಂಸೆಗೆ ಒಳಗಾಗಿದ್ದಾರೆ. ಡಿಸೆಂಬರ್ 30 ಮತ್ತು 31 ರಂದು ವರ್ಷದ ಅಂತಿಮ ದಿನದ ಸಂಭ್ರಮಕ್ಕೆ ನಗರದಾದ್ಯಂತ ಬಿಗಿ ಬಂದೋಬಸ್ತ್ ನೀಡುವ ಕಾರ್ಯದಲ್ಲಿ ತೊಡಗಿದ್ದರು. ಜನವರಿ 1 ರಿಂದ 3ರವರೆಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬೆಂಗಳೂರು ಭೇಟಿ ಇರುವುದರಿಂದ ಸೂಕ್ತ ಬಂದೋಬಸ್ತ್ ನೀಡುತ್ತಿದ್ದಾರೆ.
ಇಂದಿನಿಂದ ನಗರದಲ್ಲಿ ಮತ್ತೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಪ್ರಾರಂಭವಾಗಿದೆ. ನಿನ್ನೆ ಸಂಜೆಯೇ ಫ್ರೀಡಂಪಾರ್ಕ್ ಗೆ ವಿವಿಧ ಜಿಲ್ಲೆಗಳಿಂದ ಆಶಾ ಕಾರ್ಯಕರ್ತರು ಆಗಮಿಸಿದ್ದು, ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ನಗರದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯೂ ನಡೆಯುತ್ತಿರುವುದರಿಂದ ಬೆಂಗಳೂರಿನ ಪೊಲೀಸರು ಹೈರಾಣಗೊಂಡಿದ್ದಾರೆ.