– 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಾರು ವಶ
ಬೆಂಗಳೂರು: ಕಾರ್ನಲ್ಲಿ ಬಂದು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ನಾಲ್ವರು ಖತರ್ನಾಕ್ ಕಳ್ಳರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್ ಮುನಿಸ್ವಾಮಿ (27), ಶಶಿ ಸರವಣ (23), ಮೋಹನ್ಕುಮಾರ್ ಗುಣಶೇಖರ್ (21) ಹಾಗೂ ಪ್ರಶಾಂತ್ ಪ್ರೇಮಕುಮಾರ್ (20) ಬಂಧಿತ ಕಳ್ಳರು. ಕೆ.ಪಿ ಅಗ್ರಹಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ಕೃತ್ಯಕ್ಕೆ ಬಳಿಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಕಳ್ಳರು ಕಲಾಸಿಪಾಳ್ಯ, ಆರ್.ಟಿ ನಗರ, ಕೆ.ಪಿ ಅಗ್ರಹಾರ, ಅನ್ನಪೂರ್ಣೇಶ್ವರಿ ನಗರ, ಬನಶಂಕರಿ ನಗರ ಸೇರಿದಂತೆ ವಿವಿಧೆ ಕಡೆ ತಮ್ಮ ಕೈ ಚಳಕ ತೋರಿಸಿದ್ದಾರೆ.
ಅನಿಲ್ ದಂಪತಿ ಬನಶಂಕರಿಯ 2ನೇ ಹಂತದ ಬಳಿ ಏಪ್ರಿಲ್ 26ರಂದು ಬೆಳಗ್ಗೆ ವಾಕಿಂಗ್ಗೆ ತೆರಳಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪ್ರಕಾಶ್ ಅಂಡ್ ಗ್ಯಾಂಗ್ ಅನಿಲ್ ಅವರ ಪತ್ನಿಯ ಚಿನ್ನದ ಸರವನ್ನು ಕಿತ್ತುಕೊಂಡು ಓಡಲು ಆರಂಭಿಸಿದ್ದರು. ಓಡುತ್ತಿದ್ದ ಕಳ್ಳನನ್ನು ತಡೆಯುವುದಕ್ಕೆ ಹೋಗಿದ್ದ ಅನಿಲ್ ಅವರಿಗೆ ಚಾಕುನಿಂದ ಇರಿದು, ಕಾರ್ ಹತ್ತಿ ಪರಾರಿಯಾಗಿದ್ದರು. ಈ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ ಚೆನ್ನಣ್ಣನವರ್ ತಿಳಿಸಿದ್ದಾರೆ.
ಈ ಸಂಬಂಧ ಅನಿಲ್ ಅವರು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ತಮ್ಮ ತಂಡಕ್ಕೆ ಸಿಸಿಟಿವಿ ವಿಡಿಯೋ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಾಚರಣೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹೇಳಿದರು.
ಈ ನಾಲ್ಕು ಜನ ಖತರ್ನಾಕ್ ಕಳ್ಳರು ಮೊದಲಿಗೆ ಕಾರ್ ಕದಿಯುತ್ತಿದ್ದರು. ಬಳಿಕ ಅದೇ ಕಾರಿನಲ್ಲಿ ತೆರಳಿ ಸರ ಕಳ್ಳತನ ಮಾಡುತ್ತಿದ್ದರು. ಬೆಳಗ್ಗೆ ವಾಕಿಂಗ್ ಹೋಗುವ ಒಂಟಿ ಮಹಿಳೆಯರೇ ಬಂಧಿತರ ಟಾರ್ಗೆಟ್ ಆಗಿತ್ತು. ಒಂದು ಯಾರಾದರೂ ಹಿಡಿಯಲು ಬಂದರೆ ಹಿಂದೆ, ಮುಂದೆ ನೋಡದೆ ಡ್ರಾಗರ್ ನಿಂದ ಇರಿದು ಪಾರಾರಿಯಾಗುತ್ತಿದ್ದ ಎಂದು ತಿಳಿಸಿದರು.