ಬೆಂಗಳೂರು: ಚಹರೆ ಬದಲಾಯಿಸಿಕೊಂಡು ಕಳ್ಳತನ ಮಾಡುತ್ತಿದ್ದ ಕೋಲಾರ ಜಿಲ್ಲೆ ಕೆಜಿಎಫ್ ಮೂಲದ ಕುಖ್ಯಾತ ಕಳ್ಳನನ್ನು ನಗರದ ಪೊಲೀಸರು ಬಂಧಿಸಿ, 13 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆಜಿಎಫ್ನ ರಮೇಶ್ ಬಂಧಿತ ಆರೋಪಿ. ಅಷ್ಟೇ ಅಲ್ಲದೆ ರಮೇಶ್ ಕಳ್ಳತನ ಮಾಡಿ ತರುತ್ತಿದ್ದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳನ್ನು ಮಾರುತ್ತಿದ್ದ ಆರೋಪಿ ರಾಮ್ಕುಮಾರ್ ನನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ರಮೇಶ್ 1996ರಲ್ಲಿ ಕಳ್ಳತನ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ. ಶಿಕ್ಷೆ ಮುಗಿದು ವಾಪಾಸ್ ಆದ ರಮೇಶ್ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದ. ಫುಲ್ ಆ್ಯಕ್ಟಿವ್ ಆಗಿರುವ ರಮೇಶ್ ಚಹರೆ ಬದಲಿಸಿಕೊಂಡು ಕಳೆದ 4 ವರ್ಷಗಳಿಂದ ಅನೇಕ ಮನೆಗಳಲ್ಲಿದ್ದ ಚಿನ್ನಾಭರಣ, ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ರಮೇಶ್ ದೋಚುತ್ತಿದ್ದನು. ಬಳಿಕ ಅವುಗಳನ್ನು ಆರೋಪಿ ರಾಮ್ಕುಮಾರ್ ಮಾರಾಟ ಮಾಡುತ್ತಿದ್ದ.
ರಮೇಶ್ ಕಳ್ಳತನ ಮಾಡುತ್ತಿದ್ದ ದೃಶ್ಯಗಳನ್ನು ಸಿಸಿಟಿವಿಯಲ್ಲಿ ನೋಡಿದ್ದ ಪೊಲೀಸರು ಈತ ಹೊಸ ಕಳ್ಳ ಅಂತ ತಿಳಿದಿದ್ದರು. ಹೀಗಾಗಿ ರಮೇಶ್ ನಾಲ್ಕು ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಲೇ ಇದ್ದ. ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ವಿಚಾರಣೆ ನಡೆಸಿದ್ದ ಪೊಲೀಸರು, ಫಿಂಗರ್ ಪ್ರಿಂಟ್ ಅನ್ನು ಹೋಲಿಕೆ ಮಾಡಿದಾಗ ರಮೇಶ್ ಕೃತ್ಯ ಬಯಲಿಗೆ ಬಂದಿದೆ. ತಕ್ಷಣವೇ ರಮೇಶ್ ಹಾಗೂ ರಾಮ್ ಕುಮಾರ್ ನನ್ನು ಬಂಧಿಸಿ, 13 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳು ವಶಕ್ಕೆ ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv