ಬೆಂಗಳೂರು: ಹಣ ನೀಡಿದರೆ ಯಾರಿಗೆ ಬೇಕಾದರೂ ಬೇಲ್ ಕೊಡಿಸುತ್ತಿದ್ದ ಸಿಲಿಕಾನ್ ಸಿಟಿಯ ವ್ಯಕ್ತಿಯೊಬ್ಬನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.
ನವೀನ್ ಕುಮಾರ್ ಬಂಧಿತ ಆರೋಪಿ. ಜಮೀನಿನ ಪಹಣಿ ಮತ್ತು ಮ್ಯುಟೇಷನ್ ನಂಬರ್ ನೀಡಿ ಕಳ್ಳ-ಕಾಕರಿಗೆಲ್ಲ ಜಾಮೀನು ಕೊಡಿಸುವ ಕೆಲಸವನ್ನು ನವೀನ್ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ನಕಲಿ ಶ್ಯೂರಿಟಿಗಳನ್ನು ಸಿದ್ಧಪಡಿಸುತ್ತಿದ್ದನು. ಸಿಟಿ ಸಿವಿಲ್ ಕೋರ್ಟ್, ಎಸಿಎಂಎಂ ಕೋರ್ಟ್ ಗಳಲ್ಲಿ ಆರೋಪಿಗಳಿಗೆ ಶ್ಯೂರಿಟಿ ನೀಡಿ, ಜಾಮೀನಿಗೆ ನವೀನ್ ಸಹಿ ಹಾಕುತ್ತಿದ್ದನು.
ಪೊಲೀಸ್ ಕೈಗೆ ಸಿಕ್ಕಿದ್ದು ಹೇಗೆ?:
ನೆಲಮಂಗಲ ತಾಲೂಕಿನ ದಾಸನಪುರದ ಭೈರೇಗೌಡ ಎಂಬವರ ಜಮೀನಿನ ಪಹಣಿ ಮತ್ತು ಮ್ಯುಟೇಷನ್ ಮಾಡಿಸಿಕೊಂಡಿದ್ದ. ಹೀಗಾಗಿ ಅವರಿಂದ ಸರ್ವೇ ನಂ 7/3ರಲ್ಲಿನ 17.5 ಗುಂಟೆ ಜಮೀನಿನ ಪಹಣಿ ಮತ್ತು ಮ್ಯೂಟೇಷನ್ ಪ್ರತಿಗಳನ್ನ ಪಡೆದಿದ್ದ. ಬಳಿಕ ಭೈರೇಗೌಡರ ಹೆಸರಲ್ಲಿ ನಕಲಿ ಮತಪತ್ರವನ್ನು ತಯಾರಿಸಿ, ಅದಕ್ಕೆ ಫೋಟೋ ಹಾಕಿದ್ದಾನೆ.
ಭೈರೇಗೌಡ ಅವರ ಶ್ಯೂರಿಟಿ ಪಡೆದ ನವೀನ್, ಮೈಕಲ್ ಟೋನಿಗೆ ಜಾಮೀನು ಕೊಡಿಸಿದ್ದ. ಆದರೆ ಜೈಲಿನಿಂದ ಬಿಡುಗಡೆಯಾದ ಮೈಕಲ್ ಟೋನಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಶ್ಯೂರಿಟಿ ನೀಡಿದ್ದ ಭೈರೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಇದರಿಂದ ಬೆಚ್ಚಿಬಿದ್ದ ಭೈರೇಗೌಡ ನಾನು ಯಾರಿಗೂ ಶ್ಯೂರಿಟಿ ನೀಡಿಲ್ಲ ಅಂತಾ ನ್ಯಾಯಾಧೀಶರಿಗೆ ತಿಳಿಸಿದ್ದಾರೆ. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಭೈರೇಗೌಡ, ನವೀನ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಭೈರೇಗೌಡ ಅವರ ಹೇಳಿಕೆ ಆಧಾರದ ಮೇಲೆ ನವೀನ್ನನ್ನು ಕೊತ್ತನೂರು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಳಿಕ ವಿಚಾರಣೆಗೆ ಒಳಪಡಿಸಿದಾಗ, ಹೊಡೆದಾಟ, ದರೋಡೆ, ಚೆಕ್ ಬೌನ್ಸ್, ಕಳ್ಳತನ, ವಾಹನ ರಿಲೀಸ್, ಡ್ರಗ್ಸ್ ಸೇರಿದಂತೆ ಅನೇಕ ಪ್ರಕರಣಗಳಿಗೆ ಜಾಮೀನು ಕೊಡಿಸುತ್ತಿದ್ದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv