ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಮಾಡಲು ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಅಧಿಕಾರಿಗಳು ಯಾರೂ ಸರಿಯಾಗಿ ಭೇಟಿಯಾಗಲು ಸಿಗುವುದಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ರಜೆಯನ್ನ ಹೊರತುಪಡಿಸಿ ಪ್ರತಿದಿನ ಸಾರ್ವಜನಿಕರು ಅಧಿಕಾರಿಗಳನ್ನು ಮಧ್ಯಾಹ್ನ 3.30 ರಿಂದ 5.30 ವರೆಗೆ ಭೇಟಿಯಾಗಬಹುದು. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಡಿಸಿ ಕಚೇರಿ, ಬಿಬಿಎಂಪಿ ಸೇರಿದಂತೆ ಎಲ್ಲ ಜಿಲ್ಲೆಗಳ ಸರ್ಕಾರಿ ಕಚೇರಿಗಳಿಗೂ ಈ ಆದೇಶ ಅನ್ವಯವಾಗಲಿದೆ. ಹಿಂದೆಯೂ ಈ ಆದೇಶ ಇತ್ತು. ಆದರೆ ಅದು ಸರಿಯಾಗಿ ಪಾಲನೆಯಾಗದ ಕಾರಣ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಹೊಸ ಅದೇಶದ ಪ್ರಕಾರ 3.30 ರಿಂದ 5.30 ವರೆಗೆ ಸಾರ್ವಜನಿಕರು ಅಧಿಕಾರಿಗಳನ್ನ ಭೇಟಿಯಾಗಬಹುದು. ಸಾರ್ವಜನಿಕರ ಭೇಟಿಗೆ ನಿಗದಿಪಡಿಸಿರುವ ಸಮಯದಲ್ಲಿ ಅಧಿಕಾರಿಗಳು ಯಾವುದೇ ಸಭೆಗಳನ್ನ ನಡೆಸಬಾರದು. ನಿಗದಿ ಮಾಡಿದ ಸಮಯದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸಮಯಾವಕಾಶ ನೀಡಬೇಕು ಎಂದು ತಾಕೀತು ಮಾಡಲಾಗಿದೆ.
ಒಂದು ವೇಳೆ ಅಧಿಕಾರಿಗಳು ಈ ಆದೇಶವನ್ನು ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ. ಸರ್ಕಾರದ ಹೊಸ ಕಟ್ಟುನಿಟ್ಟಿನ ಆದೇಶದಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.