ನೆಲಮಂಗಲ: ಬೆಂಗಳೂರು ನಗರದಲ್ಲಿ ಪ್ರಾರಂಭವಾದ ವಾಸವಿ ಪ್ರಚಾರ ರಥ ಹಾಗೂ ಅಮ್ಮನವರ ರಜತ ವಿಗ್ರಹದ ಪೂಜೆ, ಭಜನೆ, ಉತ್ಸವವನ್ನು ತ್ಯಾಮಗೊಂಡ್ಲು ಆರ್ಯವೈಶ್ಯ ಮಂಡಳಿಯವರು ವಾಸವಾಂಬ ತಾಯಿ ಹಾಗೂ ಮನೆ ಮನೆಗೆ ವಾಸವಿ ಟ್ಯಾಬ್ಲೋವನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಪ್ರಮುಖ ಬೀದಿಗಳಲ್ಲಿ ಬೆಂಗಳೂರಿನಿಂದ ಆಗಮಿಸಿದ ಕನ್ನೀಕಾ ಪರಮೇಶ್ವರಿ ತಾಯಿಯನ್ನು ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳಾದ ಕಂಸಾಳೆ, ವೀರಗಾಸೆ, ವೀಣಾ ಮಕ್ಕಳ ಮಂದಿರ ಶಾಲೆಯ ಮಕ್ಕಳಿಂದ ಚಂಡೆವಾದನ ಹಾಗೂ ವಾಸವಿ ಮಹಿಳಾ ಮಣಿಗಳಿಂದ ಕೋಲಾಟ ಕಾರ್ಯಕ್ರಮದ ಮುಖಾಂತರ ಮನೆ ಮನೆಗೆ ವಾಸವಿ ಮಾತೆಯನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮನೆ ಮನೆಗೆ ಹೋಗಿ ವಾಸವಿ ಟ್ರಸ್ಟ್ ನ ಅಧ್ಯಕ್ಷ ಕುಮಾರ ಗುಪ್ತಾ ಮಾತನಾಡಿ, ರಾಜಧಾನಿ ಬೆಂಗಳೂರನ್ನು ಬಿಟ್ಟು ಮೊದಲ ಬಾರಿಗೆ ವಾಸವಿ ತಾಯಿ ಗ್ರಾಮಾಂತರ ಪ್ರದೇಶವಾದ ತ್ಯಾಮಗೊಂಡ್ಲುವಿಗೆ ಆಗಮಿಸಿದೆ. ಬೆಂಗಳೂರಿನಲ್ಲಿ 96 ಮನೆಗಳಿಗೆ ದೇವಿಯನ್ನು ಕರೆತಂದಿದ್ದೇವೆ. ನಮ್ಮ ಸಮುದಾಯದವರಲ್ಲಿ ತಾಯಿಯ ಮಹಿಮೆ ತಿಳಿಸುವ ಅರಿವಿನ ಕಾರ್ಯ ಇದ್ದಾಗಿದ್ದು, ನಮ್ಮ ಸಮುದಾಯದವರಲ್ಲಿ ವಿವಾಹದಲ್ಲಿ ಯಾವುದೇ ವರ-ವಧು ಮಧ್ಯೆ ವಿಚ್ಛೇದನ ಬಾರದಂತೆ ತಾಯಿಯ ಸಮ್ಮಖದಲ್ಲೇ ವಿವಾಹ ಎಂಬ ಕಾರ್ಯವನ್ನು ಏರ್ಪಡಿಸಿ ವಿಚ್ಛೇದನವನ್ನು ಕಡಿಮೆಮಾಡಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿದ್ದೇವೆ. ಈ ಮನೆ ಮನೆಗೆ ವಾಸವಿಯಿಂದ ಸಮುದಾಯದವರಲ್ಲಿ ಒಗ್ಗಟ್ಟು ಸಾಧಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಆರ್.ಎಸ್. ಅನಿಲ್ ಕುಮಾರ್, ವಾಸವಿ ಜನಸಂಘದ ಕಾರ್ತೀಕ್, ಗಣಪತಿ ಕಾಫಿ ವಕ್ರ್ಸ್ ನ ಆರ್.ಎಸ್. ಮೋಹನ್ ಕುಮಾರ್, ಎಸ್.ಪಿ. ಮೆಡಿಕಲ್ಸ್ ನ ಹರೀಶ್ ಬಾಬು, ಮಂಡಳಿಯ ಶ್ರೀನಿವಾಸ್ ಬಾಬು, ನಟೇಶ್, ಟಿ.ವಿ. ನರೇಂದ್ರ, ನಾಗರ್ಜುನ್, ಈಶ್ವರ್, ಬದ್ರಿನಾಥ್, ವಾಸವಿ ಮಹಿಳಾ ಸಂಘದ ಸುಮ, ರಮ್ಯಾ, ರಶ್ಮಿ, ಸರಸ್ವತೀ, ಜ್ಯೋತಿ, ಇನ್ನೀತರರು ಹಾಜರಿದ್ದರು.