ಬೆಂಗಳೂರು: ತನ್ನ ಮಗ ಅಂತರ್ಜಾತಿ ವಿವಾಹವಾಗಿರುವುದ್ದಕ್ಕೆ ಗ್ರಾಮಸ್ಥರು ನಿಂದನೆ ಮಾಡುತ್ತಿದ್ದರಿಂದ ಮನನೊಂದ ತಂದೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿರುವ ತಂದೆಯನ್ನು ನೆಲಮಂಗಲ ತಾಲೂಕಿನ ಆನಂದ್ ನಗರದ ನಿವಾಸಿ 53 ವರ್ಷದ ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಮಗ ಶಿವಕುಮಾರ್, ಬೇರೆ ಜಾತಿಯ ಕಿರಣ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಮದುವೆಗೆ ವಿರೋಧ ಮಾಡಿದ್ದ ಗ್ರಾಮಸ್ಥರು ಕೃಷ್ಣಪ್ಪನನ್ನು ನಿಂದಿಸಿದ್ದಾರೆ.
ಗ್ರಾಮಸ್ಥರ ನಿಂದನೆಯಿಂದ ಬೇಸತ್ತಿದ್ದ ಕೃಷ್ಣಪ್ಪ ಗ್ರಾಮಸ್ಥರ ವಿರುದ್ಧ ನೊಂದು ಡೆತ್ ನೋಟ್ ಬರೆದು ವಿಷ ಸೇವನೆ ಮಾಡಿದ್ದಾರೆ. ತೀವ್ರ ಅಸ್ವಸ್ಥ ಆಗಿದ್ದ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.