– ಹೊರಗೆ ಬರಬೇಡಿ ಎಂದು ಮನವಿ ಮಾಡಿದ್ರೂ ಕೇಳ್ತಿಲ್ಲ
ಬೆಂಗಳೂರು: ಮಹಾಮಾರಿ ಕೊರೊನಾ ರೋಗದ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ಡೌನ್ ಆಗಿ ಇಂದಿಗೆ ಹದಿನೈದು ದಿನಗಳೇ ಕಳೆದಿವೆ. ಆದರೂ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಇನ್ನೂ ಬ್ರೇಕ್ ಹಾಕಿಲ್ಲ. ಪೊಲೀಸರು ಬುದ್ಧಿವಾದ ಹೇಳುವುದು ಕೂಡ ತಪ್ಪಿಲ್ಲ.
ಹೌದು. ಬೆಂಗಳೂರು ಹೊರವಲಯ ನೆಲಮಂಗಲ ಟೌನ್ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿ ಕಾನೂನು ಉಲ್ಲಂಘಿಸಿದವರಿಗೆ ತಕ್ಕ ಪಾಠ ಕಲಿಸಿದ್ದಾರೆ. ನೂರಕ್ಕೂ ಹೆಚ್ಚು ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಲಾಠಿ ಹಿಡಿದು ರಸ್ತೆಗಿಳಿದ ಪೊಲೀಸರು, ಹೊರಗಡೆ ಬರಬೇಡಿ ಎಂದು ಮನವಿ ಮಾಡಿದರೂ ಕೇಳದ ಜನರಿಗೆ ಒಳ್ಳೆಯ ಪಾಠನೇ ಕಲಿಸಿದ್ದಾರೆ.
ಅನಾವಶ್ಯಕವಾಗಿ ರಸ್ತೆಗೆ ಬಂದ ನೂರಾರು ಬೈಕ್, ಕಾರು, ಆಟೋಗಳನ್ನು ಪೊಲೀಸರು ವಶಕ್ಕೆ ಪಡೆದು ಲಾಕ್ಡೌನ್ ಮುಗಿಯುವ ತನಕ ವಾಹನ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ನಾನಾ ಕಾರಣ ಹೇಳಿ ಓಡಾಡುತ್ತಿರುವ ವಾಹನ ಸವಾರರಿಗೆ ಟೌನ್ ಪಿಎಸ್ಐ ಮಂಜುನಾಥ್ ಕಾನೂನು ಪಾಠ ಹೇಳಿದ್ದಾರೆ. ಇಷ್ಟೆಲ್ಲ ದಿನವಾದರೂ ಕೊರೊನಾ ಲಾಕ್ಡೌನ್ ಬಗ್ಗೆ ಮಾಹಿತಿ ಇದ್ದರೂ ಇನ್ನೂ ಜನರಿಗೆ ಜಾಗೃತಿ ಮೂಡಿಲ್ಲ ಎಂಬುದೇ ವಿಪರ್ಯಾಸ.