ಬೆಂಗಳೂರು: ಪೇಜಾವರ ಸ್ವಾಮೀಜಿಗಳು ವಿಶ್ವ ಸಂತರು ಅವರನ್ನು ನಡೆದಾಡುವ ದೇವರು ಅಂತಲೇ ಕರೆದವರು. ಸಂತರಾಗಿ ಹಿಂದೂ ಸಮಾಜಕ್ಕೆ ಪ್ರೇರಣೆ ಶಕ್ತಿ ಕೊಟ್ಟವರು. ಆಯೋಧ್ಯೆಯ ಮಂದಿರಕ್ಕಾಗಿ ಹೋರಾಟ ಮಾಡಿದವರು. ಎಲ್ಲರನ್ನೂ ಸೋದರರಂತೆ ಕಂಡ ಶ್ರೀಗಳು ಎಲ್ಲ ಮತ ಧರ್ಮದವರ ಜೊತೆ ಸಂಬಂಧಗಳನ್ನು ಬೆಳೆಸಿ ಗೌರವಿಸುತ್ತಿದ್ದರು ಎಂದು ಶ್ರೀಗಳ ಆಗಲಿಕೆಗೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದರು.
ಕೆಐಎಎಲ್ನಲ್ಲಿ ಮಾತನಾಡಿದ ಅವರು ಶ್ರೀಗಳು ಪರಿಸರದ ವಿಷಯಗಳ ಬಗ್ಗೆ ಕಾಳಜಿವಹಿಸಿ ಹೋರಾಟ ಮಾಡಿದರು. ಸಮಾಜಕ್ಕೆ ಅನ್ಯಾಯವಾದಗ ಪ್ರತಿಭಟನೆ ಮಾಡಿದರು. ಅಸ್ಪೃಶ್ಯತೆ ವಿಷಯದಲ್ಲಿ ನಿವಾರಣೆಗೆ ಅದ್ಭುತ ಕೆಲಸ ಮಾಡಿದವರು. ಅವರಲ್ಲಿ ನಾವು ದೇವರನ್ನು ಕಂಡಿದ್ದೀವಿ. ರಾಷ್ಟ್ರದ ಯಾವುದೇ ಸಮಸ್ಯೆಗಳು ಬಂದರೂ ರಾಷ್ಟ್ರದ ಪರವಾಗಿ ನಿಂತು ಕೆಲಸ ಮಾಡುತ್ತಿದ್ದರು. ಅಧ್ಯಾತ್ಮಿಕ ಚಿಂತನೆಗಳ ಜೊತೆಗೆ ಸಾಮಾಜಿಕ ಕಳಿಕಳಿ ಹೊಂದಿದ್ದ ಸಂತರನ್ನ ನಾವು ಇಂದು ಕಳೆದುಕೊಂಡಿದ್ದೇವೆ ಎಂದು ಹೇಳಿದರು.
ಅವರ ಜೊತೆ ಕಳೆದ 10-20 ವರ್ಷಗಳ ನಿಕಟ ಸಂಪರ್ಕ ಹೊಂದಿದ್ದೇನೆ. ಪರಿಸರದ ಹೋರಾಟಗಳಿಗೆ ನಮಗೆ ಬೆಂಬಲಿಸಿದ್ದಾರೆ. ರಾಮಮಂದಿರ ಹೋರಾಟಕ್ಕೆ ನನಗೆ ಮಾರ್ಗದರ್ಶನ ನೀಡಿದ್ದಾರೆ. ಎಲ್ಲಾ ಸಂದರ್ಭಗಳಲ್ಲೂ ನಮ್ಮನ್ನ ಎಚ್ಚರಿಸಿ ಸಾಮಾಜಿಕ ಕಾರ್ಯ ಮಾಡಲು ಪ್ರೇರಣೆ ಕೊಟ್ಟ ಸಂತರು ನಮ್ಮ ಜೊತೆ ಇಲ್ಲ. ರಾಮಮಂದಿರವನ್ನು ನೋಡಿ ಅವರು ದೇವರ ಪಾದ ಸೇರಬೇಕಿತ್ತು. ರಾಮಮಂದಿರ ವಿಚಾರದಲ್ಲಿ ನ್ಯಾಯಕ್ಕೆ ಜಯ ಸಿಕ್ಕಾಗ ಸಂತೋಷಪಟ್ಟವರು. ಈಗ ಅವರ ಮಾರ್ಗದರ್ಶನದಲ್ಲಿ ನಡೆಯೋದಷ್ಟೆ ನಮ್ಮ ಕೆಲಸ. ಅವರ ಹಾಗೂ ನಮ್ಮ ಅಪೇಕ್ಷೆಯಂತೆ ರಾಮನ ಪ್ರತಿಷ್ಠಾಪನೆ ಕಂಡಾಗ ಸ್ವಾಮೀಜಿಗಳ ಕಣ್ತುಂಬಿಕೊಳ್ಳುವ ಆಸೆ ಇತ್ತು. ಆದರೆ ಅದು ಆಗಲಿಲ್ಲ ಇದು ದೇವರ ಇಚ್ಛೆ ಎಂದರು.