ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru Mysuru Expressway) ಮಾರ್ಚ್ 14ರಿಂದಲೇ ಟೋಲ್ (Toll) ಸಂಗ್ರಹ ಆರಂಭವಾಗಿದ್ದು, ಈ ಟೋಲ್ ಶುಲ್ಕದ ಹೊರೆಯನ್ನು ಕೆಎಸ್ಆರ್ಟಿಸಿ (KSRTC) ಪ್ರಯಾಣಿಕರ ಹೆಗಲಿಗೆ ಹೊರಿಸಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಕಟಣೆ ಹೊರಡಿಸಿದೆ. ಎಕ್ಸ್ಪ್ರೆಸ್ವೇಯ ಮೊದಲ ಹಂತದ ಬೆಂಗಳೂರು-ನಿಡಘಟ್ಟ ಮಧ್ಯದಲ್ಲಿನ ಕಣಿಮಿಣಿಕೆ ಟೋಲ್ ಮುಖಾಂತರ ಸಂಚರಿಸುವ ಬಸ್ಸುಗಳಿಂದ ಮಾರ್ಚ್ 14ರಿಂದಲೇ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾರಂಭಿಸಿದೆ. ಇದನ್ನೂ ಓದಿ: ಮಾರ್ಚ್ 14ರಿಂದಲೇ ದಶಪಥ ರಸ್ತೆಯಲ್ಲಿ ಟೋಲ್ ಸಂಗ್ರಹ ಶುರು
ಈ ವೆಚ್ಚ ಸರಿದೂಗಿಸಲು ಟೋಲ್ ಶುಲ್ಕದ ಹೊರೆಯನ್ನು ಪ್ರಯಾಣಿಕರ ಹೆಗಲಿಗೆ ಹೊರಿಸಲಾಗಿದೆ. ಎಕ್ಸ್ಪ್ರೆಸ್ವೇ ಮೂಲಕ ಸಂಚರಿಸುವ ನಿಗಮದ ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ತಲಾ ಪ್ರಯಾಣಿಕರಿಂದ 15 ರೂ., ರಾಜಹಂಸ ಬಸ್ಸುಗಳಲ್ಲಿ ತಲಾ 18 ರೂ. ಹಾಗೂ ಮಲ್ಟಿ ಆಕ್ಸಲ್ ಅಥವಾ ಇತರೇ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ತಲಾ 20 ರೂ. ಅನ್ನು ಬಳಕೆದಾರರ ಶುಲ್ಕವನ್ನಾಗಿ (ಟೋಲ್) ಸಂಗ್ರಹಿಸುವುದು ಅನಿವಾರ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ:ಮೋದಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಹೆದ್ದಾರಿಯಲ್ಲಿ ಸಂಚಾರಕ್ಕೆ ಅನುಮತಿ
ಬಳಕೆದಾರರ ಶುಲ್ಕವು ಎಕ್ಸ್ಪ್ರೆಸ್ವೇ ಮೂಲಕ ಕಾರ್ಯಾಚರಣೆಯಾಗುವ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗುತ್ತದೆ. ಉಳಿದ ಸಾರಿಗೆಗಳಿಗೆ ಅನ್ವಯಿಸುವುದಿಲ್ಲ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.