ರಾಮನಗರ: ಇನ್ನೋವಾ ಮತ್ತು ಆಲ್ಟೋ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಒಂದೇ ಕುಟುಂಬದ 5 ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ (Bengaluru-Mysuru Expressway) ಚನ್ನಪಟ್ಟಣ (Channapatna) ಬೈಪಾಸ್ನಲ್ಲಿ ನಡೆದಿದೆ.
ಬೆಂಗಳೂರಿನ (Bengaluru) ಕೆಂಗೇರಿ ಸಮೀಪದ ಚೈತನ್ಯ ನಗರ ನಿವಾಸಿಗಳಾದ ರವಿ ಪೂಜಾರ್ (46), ಇಂಚರ ಪೂಜಾರ್ (15), ಸಿರಿ ಪೂಜಾರ್ (3) ಸ್ಥಳದಲ್ಲೇ ಸಾವಿಗೀಡಾಗಿದ್ದು, ಲಕ್ಷ್ಮಿ ಪೂಜಾರ್ (40) ಶಾಂತಲಾ ಪೂಜಾರ್ (8) ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಬಿಜೆಪಿ, ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ನಡುವೆ ಮಾರಾಮಾರಿ – ಹಲ್ಲೆಯಿಂದ ತಪ್ಪಿಸಿಕೊಳ್ಳಲು ಮನೆಯ ಮೇಲ್ಛಾವಣೆ ಏರಿದ್ರು!
ಮೃತರು ಒಂದೇ ಕುಟುಂಬದವರು ಎಂದು ತಿಳಿದು ಬಂದಿದ್ದು, ಬೆಂಗಳೂರಿನ ನಿವಾಸಿಗಳಾದ ಇವರು ಹುಣಸೂರಿನಲ್ಲಿ ಸ್ನೇಹಿತರ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಲ್ಟೋ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡ್ಯ ಸಮೀಪದ ಬೈಪಾಸ್ ರಸ್ತೆಯಲ್ಲಿ ಇವರು ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಡಿವೈಡರ್ ದಾಟಿ ರಸ್ತೆಯ ಮತ್ತೊಂದು ಬದಿಗೆ ನೆಗೆದಿದೆ. ಈ ಸಂದರ್ಭದಲ್ಲಿ ಮೈಸೂರು ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಆಲ್ಟೋ ಕಾರು ಡಿಕ್ಕಿ ಹೊಡೆದ ಪರಿಣಾಮ ಆಲ್ಟೋ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.
ಆಲ್ಟೋ ಕಾರಿನಲ್ಲಿದ್ದ ಮೂರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಇಬ್ಬರು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಬಕಾರಿ ಅಧಿಕಾರಿಗಳ ದಾಳಿ – ಜಮೀನಿನಲ್ಲಿ ಅಡಗಿಸಿಟ್ಟಿದ್ದ 70 ಲಕ್ಷ ಮೌಲ್ಯದ ಸಿಹೆಚ್ ಪೌಡರ್ ಜಪ್ತಿ