ಬೆಂಗಳೂರು: ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಸೋಮವಾರ ಅಧಿಕೃತವಾಗಿ ಮೊತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ವೇಳೆ ಬಿಜೆಪಿ ಮುಖಂಡರು ಸೇರಿಂದಂತೆ ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡರು ಬರುತ್ತಾರೆ ಎಂದು ಎಂಟಿಬಿ ನಾಗರಾಜ್ ಅವರು ಹೇಳಿದ್ದಾರೆ.
ಬುಧವಾರ ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಉಪಚುನಾವಣಾ ಕಣ ರಂಗೇರುವಂತೆ ಮಾಡಿದೆ. ಅದರಲ್ಲೂ ಹೊಸಕೋಟೆಯಲ್ಲಿ ಬಿಜೆಪಿಯಿಂದ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದರೆ ಇನ್ನೊಂದು ಕಡೆ ಬಿಜೆಪಿ ಸಂಸದ ಬಚ್ಚೇಗೌಡ ಅವರ ಪುತ ಶರತ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಉಪಚುನಾವಣೆಯ ಕಾವು ಹೆಚ್ಚಾಗುವಂತೆ ಮಾಡಿದೆ.
ಇಂದು ಅವಿಮುಕ್ತೇಶ್ವರ ದೇವಾಲಯದಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ, ಈಗಾಗಲೇ ನನಗೆ ಬಿಜೆಪಿ ಬಿ ಫಾರಂ ನೀಡಿದೆ. ಸಾಂಕೇತಿಕವಾಗಿ ಇಂದು ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಸೋಮವಾರ ಸಹ ಸಿಎಂ, ಬಿಜೆಪಿ ಮುಖಂಡರೊಂದಿಗೆ ಮತ್ತೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಈ ವೇಳೆ ಸಂಸದ ಬಚ್ಚೇಗೌಡರೂ ಬರುತ್ತಾರೆ ಎಂದು ತಿಳಿಸಿದರು.
ಒಂದು ಕಡೆ ಸ್ವಾಭಿಮಾನದ ಹೆಸರಿನಲ್ಲಿ ಶರತ್ ಬಚ್ಚೇಗೌಡ ಬಿಜೆಪಿ ವಿರುದ್ಧವೇ ತೊಡೆ ತೊಟ್ಟಿದ್ದಾರೆ. ಆದರೆ ಈಗ ಮಗನ ವಿರುದ್ಧ ಸ್ಪರ್ಧಿಸುತ್ತಿರುವ ಎಂಟಿಬಿ ನಾಗರಾಜ್ ಪರವಾಗಿ ನಾಮ ಪತ್ರ ಸಲ್ಲಿಕೆಗೆ ಬಚ್ಚೇಗೌಡರು ಬರುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.