ಬೆಂಗಳೂರು: ಪೊಲೀಸ್ ಕೇಸಿಗೆ ಹೆದರಿ ಮಗ ಆತ್ಮಹತ್ಯೆಗೆ ಶರಣಾಗಿದ್ದು, ಇತ್ತ ಈ ವಿಚಾರ ತಿಳಿದ ತಾಯಿಯೂ ಸೂಸೈಡ್ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ವಿಜಯನಗರದಲ್ಲಿ ನಡೆದಿದೆ.
ಮಗ ಮೋಹನ್ ಗೌಡ(18)ಗೆ ಬೈಕ್ ಕಳ್ಳತನ ಕೇಸ್ ಒಂದರ ಸಂಬಂಧ ವಿಜಯನಗರ ಪೊಲೀಸರು ವಿಚಾರಣೆ ಕರೆದಿದ್ದರು. ಆದರೆ ಮಗ ಮೋಹನ್ ಗೌಡ ಪೊಲೀಸರ ಕೇಸು, ವಿಚಾರಣೆ ಅಂತಾ ಹೆದರಿ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಮನೆಯಲ್ಲಿದ್ದವರು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಮಗ ಆತ್ಮಹತ್ಯೆಗೆ ಯತ್ನಿಸಿರೋ ವಿಚಾರ ತಿಳಿದ ತಾಯಿ ಲೀಲಾವತಿ ಕೂಡ ಆಸ್ಪತ್ರೆ ಬಳಿ ಓಡಾಡೋಡಿ ಬಂದಿದ್ದರು. ಆಸ್ಪತ್ರೆ ಒಳಗೆ ಹೋಗೋವಷ್ಟರಲ್ಲಿ ಮಗ ಮೋಹನ್ ಗೌಡ ಸಾವನ್ನಪ್ಪಿರೋದನ್ನು ವೈದ್ಯರು ಖಚಿತಪಡಿಸಿದ್ರು.
ಮಗ ಸಾವನ್ನಪ್ಪಿದ್ದಾನೆ ಅನ್ನೋ ವಿಚಾರವನ್ನು ಅರಗಿಸಿಕೊಳ್ಳೋಕೆ ಆಗದ ತಾಯಿ ಲೀಲಾವತಿ, ತಕ್ಷಣ ಆಸ್ಪತ್ರೆಯಿಂದ ಹೊರ ಬಂದು ಅಲ್ಲೇ ಬರುತ್ತಿದ್ದ ಕಾರಿಗೆ ತಲೆಕೊಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆಸ್ಪತ್ರೆ ಬಳಿ ಕುಟುಂಬಸ್ಥರು, ಸಾರ್ವಜನಿಕರ ಕಣ್ಣ ಮುಂದೆಯೇ ಈ ಘಟನೆ ನಡೆದಿದ್ದು, ಪೊಲೀಸರೇ ಶಾಕ್ ಆಗಿದ್ದಾರೆ.
ಮಗನ ಆತ್ಮಹತ್ಯೆ ಸಂಬಂಧ ವಿಜಯನಗರದಲ್ಲಿ ಕೇಸಾಗಿದ್ರೆ, ತಾಯಿ ಆತ್ಮಹತ್ಯೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ತಾಯಿ ಮಗನ ಆ ಒಂದು ಕ್ಷಣದ ದುಡುಕಿನ ನಿರ್ಧಾರದಿಂದ ಇಂದು ಇಡೀ ಮನೆಯೇ ಸ್ಮಶಾನವಾಗಿದೆ. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ