ಬೆಂಗಳೂರು: ಸಿದ್ದರಾಮಯ್ಯ ಅವರು ಕಾಲು ಜಾರದೆ ಎಚ್ಚರದಿಂದಿರಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ಟಾಂಗ್ ನೀಡಿದ್ದು, ಈ ಹೇಳಿಕೆಗೆ ಇಂದು ಮಾಜಿ ಮುಖ್ಯಮಂತ್ರಿಯವರು ತಿರುಗೇಟು ನೀಡಿದ್ದಾರೆ.
ಪಬ್ಲಿಕ್ ಟಿವಿ ವೆಬ್ಸೈಟ್ ನಲ್ಲಿ ಪ್ರಕಟಿಸಿದ ಸುದ್ದಿಯ ಹೆಡ್ಲೈನ್ ಸ್ಕ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ನೀವು ಇನ್ನೂ ಯುವಕರಾಗಿದ್ದು ಹೆಚ್ಚು ಸ್ಪೀಡಾಗಿ ಹೋಗಬೇಡಿ. ಜೋಪಾನ ಎಂದು ಹೇಳಿದ್ದಾರೆ.
ಸನ್ಮಾನ್ಯ @CTRavi_BJP
ಅವರೇ,
ನಾನು ಕಾಲು ಜಾರದ ಹಾಗೆ ಎಚ್ಚರದಿಂದ ನಾಲ್ಕು ದಶಕಗಳ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ.
ನೀವು ಇನ್ನೂ ಯುವಕರು,
ಹೆಚ್ಚು ಸ್ಪೀಡಾಗಿ ಹೋಗ್ಬೇಡಿ, ಜೋಪಾನ.
ಅಪಘಾತ ಮಾಡಿಬಿಟ್ಟರೆ
ಎಲ್ಲ ಸಂದರ್ಭಗಳಲ್ಲಿಯೂ ರಕ್ಷಣೆಗೆ ಹಿತೈಷಿಗಳಿರುವುದಿಲ್ಲ.@INCKarnataka pic.twitter.com/BUjjZnuW99
— Siddaramaiah (@siddaramaiah) August 30, 2019
ಟ್ವಿಟ್ ನಲ್ಲೇನಿದೆ..?
ಸನ್ಮಾನ್ಯ ಸಿಟಿ ರವಿಯವರೇ, ನಾನು ಕಾಲು ಜಾರದ ಹಾಗೆ ಎಚ್ಚರದಿಂದ ನಾಲ್ಕು ದಶಕಗಳ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನೀವು ಇನ್ನೂ ಯುವಕರು, ಹೆಚ್ಚು ಸ್ಪೀಡಾಗಿ ಹೋಗ್ಬೇಡಿ, ಜೋಪಾನ. ಅಪಘಾತ ಮಾಡಿಬಿಟ್ಟರೆ ಎಲ್ಲ ಸಂದರ್ಭಗಳಲ್ಲಿಯೂ ರಕ್ಷಣೆಗೆ ಹಿತೈಷಿಗಳಿರುವುದಿಲ್ಲ ಎಂದು ಬರೆದು ಸಿಟಿ ರವಿ ಹಾಗೂ ಐಎನ್ಸಿ ಕರ್ನಾಟಕಕ್ಕೆ ಟ್ಯಾಗ್ ಮಾಡಿದ್ದಾರೆ.
ಸಿಟಿ ರವಿ ಹೇಳಿದ್ದೇನು?
ಸರ್ಕಾರ ಟೇಕಾಫ್ ಆಗಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ್ದ ಸಚಿವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಪ್ರಶ್ನಾತೀತ ನಾಯಕ ಅಂದುಕೊಂಡಿದ್ದೆವು. ಅವರಲ್ಲಿ ಇನ್ನೂ ಪ್ರತಿಪಕ್ಷ ನಾಯಕ ಯಾರೆಂದು ನಿರ್ಧಾರ ಆಗಿಲ್ಲ. ಕಾಂಗ್ರೆಸ್ಸಿನಲ್ಲೇ ಸಿದ್ದರಾಮಯ್ಯ ಅವರ ಕಾಲೆಳೆಯೋರು ಜಾಸ್ತಿಯಾಗಿದ್ದಾರೆ. ಸಿದ್ದರಾಮಯ್ಯ ಮೊದಲು ತಮ್ಮ ಕಾಲು ಯಾರೂ ಎಳೆಯದಂತೆ ನೋಡಿಕೊಳ್ಳಲಿ. ನಮ್ಮ ಸರ್ಕಾರ ಟೇಕಾಫ್ ಆಗಿದೆ. ನಮ್ಮ ಸರ್ಕಾರ ಕಾರ್ಯಾರಂಭ ಮಾಡಿ ತಿಂಗಳಾಗಿದೆ ಎಂದು ಟಾಂಗ್ ನೀಡಿದ್ದರು.