ಬೆಂಗಳೂರು: ಬಡ್ಡಿ ಹಣ ನೀಡದ್ದಕ್ಕೆ ಲಾಡ್ಜ್ನಲ್ಲಿ ಕೂಡಿ ಹಾಕಿ ಕಿರುಕುಳ ನೀಡಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ವಿನಯ್ ಕುಮಾರ್ ಕಿರುಕುಳಕ್ಕೆ ಒಳಗಾದ ಆಟೋ ಚಾಲಕ. ಫೈನಾನ್ಸಿಯರ್ ಎಸ್ಎಲ್ಎನ್ ನವೀನ್ ನಿಂದ ಆಟೋ ಚಾಲಕ ವಿನಯ್ ಕುಮಾರ್ 10 ವರ್ಷಗಳ ಹಿಂದೆ 35 ಸಾವಿರ ರೂ. ಪಡೆದಿದ್ದರು. ಪ್ರತಿ ತಿಂಗಳು ಬಡ್ಡಿ ಕಟ್ಟುತ್ತಿದ್ದ. ಆದರೆ ಇತ್ತೀಚೆಗೆ ಬಡ್ಡಿ ಹಣ ನೀಡುವುದನ್ನು ನಿಲ್ಲಿಸಿದ್ದರಿಂದ ಲಾಡ್ಜ್ನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಇದನ್ನೂ ಓದಿ: ತಂದೆಯಿಂದಲೇ ಮಗನಿಗೆ ನೇಣು – ದೃಶ್ಯ ನೋಡಿ ರೂಮಲ್ಲಿ ಓಡಾಡಿ ಕಣ್ಣೀರಿಟ್ಟ ತಾಯಿ
ಈ ಕುರಿತು ವಿನಯ್ ಕುಮಾರ್ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಕೆಯ ಜೊತೆಗೆ ಲಾಡ್ಜ್ ಗೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ ವಿನಯ್ ಕುಮಾರ್ ನನ್ನು ಬಂಧನ ಮುಕ್ತಗೊಳಿಸಿದ್ದಾರೆ. ಯಾರು ನಿನ್ನನ್ನು ಕೂಡಿ ಹಾಕಿದ್ದು ಎಂದು ಪೊಲೀಸರು ಪ್ರಶ್ನಿಸಿದಾಗ ವಿನಯ್ ಕುಮಾರ್, ಭಯದಿಂದ ಆರೋಪಿಗಳ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ. ಇತ್ತ ಕಣ್ಣೀರು ಹಾಕುತ್ತಿದ್ದ ಪತ್ನಿ, ನಮಗೆ ಎರಡು ತಿಂಗಳು ಅವಕಾಶ ಕೊಡಿ. ಅಸಲು ಹಾಗೂ ಬಡ್ಡಿಯನ್ನು ಕೊಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದೇವು. ಆದರೆ ಈಗ ಪತಿಯನ್ನ ತಂದು ಕೂಡಿ ಹಾಕಿ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ನನಗೆ ಗೊತ್ತಿಲ್ಲದಂತೆ ಪತಿ ವಿನಯ್ ಕುಮಾರ್ ಫೈನಾನ್ಸಿಯರ್ ನವೀನ್ ಬಳಿ ಒಟ್ಟು 35 ಸಾವಿರ ರೂ. ಪಡೆದಿದ್ದರು. ಈ ವಿಚಾರವನ್ನು ಇತ್ತೀಚೆಗಷ್ಟೇ ನನಗೆ ಹೇಳಿದ್ದರು. ನಾನು ಕೂಲಿ ಮಾಡಿ ಕೂಡಿಟ್ಟಿದ್ದ 10 ಸಾವಿರ ರೂ. ಕೊಟ್ಟಿದ್ದೇನೆ. ಉಳಿದ ಹಣಕ್ಕೆ ಬಡ್ಡಿ ನೀಡುತ್ತಿದ್ದು, ಎಲ್ಲ ಹಣವನ್ನು ಮರು ಪಾವತಿ ಮಾಡಲು ಕಾಲಾವಕಾಶ ಕೇಳಿದ್ದೇವು. ಆದರೆ ನವೀನ್ ಮನೆಗೆ ಬಂದು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಈಗ ಪತಿಯನ್ನೇ ಕೂಡಿ ಹಾಕಿದ್ದಾರೆ ಎಂದು ವಿನಯ್ ಕುಮಾರ್ ಪತ್ನಿ ಆರೋಪಿಸಿದ್ದಾರೆ.
ನಿನ್ನೆ ರಾತ್ರಿ 8 ಗಂಟೆಗೆ ನನ್ನನ್ನು ಎಳೆದುಕೊಂಡು ಬಂದು ಕೂಡಿ ಹಾಕಿದ್ದಾರೆ ಎಂದು ಪತಿ ವಿನಯ್ ಕುಮಾರ್ ಫೋನ್ ಮಾಡಿ ಹೇಳಿದ್ದರು. ಅವರು ಫೋನ್ ಮಾಡಿದಾಗ ರಾತ್ರಿ 12 ಗಂಟೆಯಾಗಿತ್ತು. ಮನೆಯಲ್ಲಿ ಒಬ್ಬಳೆ ಇದ್ದಿದ್ದರಿಂದ ಪೊಲೀಸ್ ಠಾಣೆಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಇಡುತ್ತ ಅಳಲು ತೋಡಿಕೊಂಡರು.