ಬಿಎಸ್‍ವೈ ಕೊಟ್ಟ ಮಾತು ತಪ್ಪಲ್ಲ, ನಾನು ಮಂತ್ರಿ ಆಗೇ ಆಗ್ತೀನಿ: ಕುಮಟಳ್ಳಿ

Public TV
1 Min Read
Mahesh Kumatalli 1

ಬೆಂಗಳೂರು: ನಾನು ಮಂತ್ರಿ ಆಗೋದು ಖಚಿತ. ಯಡಿಯೂರಪ್ಪ ನಮ್ಮನ್ನ ಮಂತ್ರಿ ಮಾಡೇ ಮಾಡುತ್ತಾರೆ ಅನ್ನೋ ವಿಶ್ವಾಸ ಇದೆ ಅಂತ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಹೈಕಮಾಂಡ್ ಗೆದ್ದ 10 ಶಾಸಕರಿಗೆ ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳುತ್ತೆ ಅಂತ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಮಹೇಶ್ ಕುಮಟಳ್ಳಿರನ್ನೇ ಕೈ ಬಿಡ್ತಾರೆ ಅನ್ನೋ ಚರ್ಚೆಗಳು ನಡೀತಿವೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಕುಮಟಳ್ಳಿ ನಾನು ಮಂತ್ರಿ ಆಗೇ ಆಗ್ತೀನಿ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

kumatalli

ಯಡಿಯೂರಪ್ಪ ಕೊಟ್ಟ ಮಾತು ಯಾವತ್ತೂ ತಪ್ಪಲ್ಲ. ಪ್ರಾಣ ಬೇಕಾದರೂ ಬಿಡುತ್ತಾರೆ. ಆದರೆ ಯಡಿಯೂರಪ್ಪ ಮಾತು ತಪ್ಪಲ್ಲ ಅನ್ನೋ ಮಾತಿದೆ. ವಿರೋಧಿಗಳು ಕೂಡ ಯಡಿಯೂರಪ್ಪ ಮಾತು ತಪ್ಪಲ್ಲ ಅಂತ ಹೇಳ್ತಾರೆ. ಹೀಗಾಗಿ ನಾನು ಮಂತ್ರಿಯಾಗೋ ಸಂಪೂರ್ಣ ವಿಶ್ವಾಸ ಇದೆ ಅಂತ ತಿಳಿಸಿದ್ರು.

ಚುನಾವಣೆ ಪ್ರಚಾರದ ವೇಳೆ 35 ಸಾವಿರ ಜನರ ಮುಂದೆ ಯಡಿಯೂರಪ್ಪ ಅವರು ಶ್ರೀಮಂತ ಪಾಟೀಲ್ ಹಾಗೂ ನನ್ನನ್ನು ಮಂತ್ರಿ ಮಾಡ್ತೀನಿ ಅಂತ ಯಡಿಯೂರಪ್ಪ ಹೇಳಿದರು. ಸ್ವತಃ ಯಡಿಯೂರಪ್ಪ ಅವರೇ ಮಂತ್ರಿ ಮಾಡೋದಾಗಿ ಜನರ ಮುಂದೆಯೇ ಹೇಳಿದ್ದಾರೆ. ಹೀಗಾಗಿ ಯಡಿಯೂರಪ್ಪ ಮಾತು ತಪ್ಪದೆ ನಮ್ಮನ್ನ ಮಂತ್ರಿ ಮಾಡ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

BSY 1 3

ಇದೇ ವೇಳೆ ಸಮ್ಮಿಶ್ರ ಸರ್ಕಾರ ಇದ್ದಾಗ, ನಂತರ ರಾಜೀನಾಮೆ ಕೊಟ್ಟಾಗ ಆದ ಅವಮಾನದ ಬಗ್ಗೆಯೂ ಕುಮಟಳ್ಳಿ ಪ್ರಸ್ತಾಪ ಮಾಡಿದರು. ಈಗ ಯಡಿಯೂರಪ್ಪ, ಅಮಿತ್ ಶಾ, ಕಾರ್ಯಕರ್ತರ ನಮ್ಮನ್ನ ಪ್ರೀತಿಯಿಂದ ಕಾಣುತ್ತಿದ್ದಾರೆ. ಆದರೆ ಚುನಾವಣೆಯ ಒಂದೂವರೆ ವರ್ಷ ನಾವು ಹುಲಿ ಬಾಯಿಗೆ ತಲೆ ಕೊಟ್ಟ ಪರಿಸ್ಥಿತಿ ಇತ್ತು. ಗರಗಸಕ್ಕೆ ಸಿಕ್ಕವರಂತೆ ಆಗಿದ್ವಿ. ಆಮೇಲೆ ನಾವು ಗೆದ್ದೆವು ಯಡಿಯೂರಪ್ಪ ಸಿಎಂ ಆದ್ರು ಅನ್ನೋ ನೋವಿನ ವಿಚಾರವನ್ನು ಹಂಚಿಕೊಂಡರು.

ಇಷ್ಟೆಲ್ಲ ಅವಮಾನ ಆದ ಮೇಲೂ ನಮಗೆ ದ್ರೋಹ ಮಾಡೊಲ್ಲ ಅನ್ನೊ ನಂಬಿಕೆ ಇದೆ. ಸಂಪುಟದಿಂದ ನಮ್ಮನ್ನ ಕೈ ಬಿಡುತ್ತಾರೆ ಅನ್ನೋ ಆತಂಕ ನಮಗೆ ಇಲ್ಲ. ಒಂದು ವೇಳೆ ಮಂತ್ರಿ ಸ್ಥಾನ ಕೊಡದಿದ್ದರೆ ನಂಬಿಕೆ ದ್ರೋಹ ಆಗುತ್ತೆ. ನೂರಕ್ಕೆ ನೂರು ನಾನು ಮಂತ್ರಿ ಆಗ್ತೀನಿ ಅಂತ ವಿಶ್ವಾಸದ ಮಾತುಗನ್ನಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *