ಬೆಂಗಳೂರು: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಇಂದು ಅಂತ್ಯವಾಗಲಿದೆ. ಸುಮಾರು ಎರಡು ತಿಂಗಳ ಮಹಾಭಾರತ ಕುರುಕ್ಷೇತ್ರದ ಫಲಿತಾಂಶ ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ.
ಈ ಹಿಂದೆಯೆಲ್ಲಾ ಮೊದಲು ಅಂಚೆ ಮತಗಳನ್ನು ನಂತರ ಇವಿಎಂನಲ್ಲಿರುವ ಮತಗಳನ್ನು ಎಣಿಕೆ ಮಾಡಿ ಯಾರು ವಿಜಯಿ ಎಂದು ಘೋಷಣೆ ಮಾಡಲಾಗುತ್ತಿತ್ತು. ಆದರೆ ಬಿಜೆಪಿ ಗೆದ್ದಾಗಲೆಲ್ಲಾ, ಬಿಜೆಪಿಯೇತರ ಪಕ್ಷಗಳು ಸೋತಾಗಲೆಲ್ಲಾ ಇವಿಎಂ ಬಗ್ಗೆ ತೆಗೆಯೋ ರಾಜಕೀಯ ಪಕ್ಷಗಳ ಒತ್ತಡ, ಇವಿಎಂ ವಿಶ್ವಾಸಾರ್ಹವನ್ನ ಅನ್ನೋ ಆರೋಪಗಳ ಪರಿಣಾಮ ಐದು ಮತಗಟ್ಟೆಗಳ ವಿವಿಪ್ಯಾಟ್ ಸ್ಲಿಪ್ಗಳನ್ನು ಎಣಿಕೆ ಮಾಡಲಾಗುತ್ತದೆ.
ಎಕ್ಸಿಟ್ ಪೋಲ್ಗಳು ಹೊರಬಿದ್ದ ಬೆನ್ನಲ್ಲೇ, ಎವಿಎಂನಲ್ಲಿರುವ ಮತಗಳ ಎಣಿಕೆಗೆ ಮುನ್ನ ವಿವಿಪ್ಯಾಟ್ ಸ್ಲಿಪ್ಗಳನ್ನು ಎಣಿಕೆ ಮಾಡಿಸಬೇಕು ಎಂದು ವಿಪಕ್ಷಗಳು ಚುನಾವಣಾ ಆಯೋಗದ ಮೊರೆ ಹೋಗಿದ್ದವು. ಸುಪ್ರೀಂಕೋರ್ಟ್ ಕದವನ್ನು ತಟ್ಟಿದ್ದವು. ಆದರೆ ಎಲ್ಲಾ ಕಡೆಯೂ ವಿಪಕ್ಷಗಳ ಆರೋಪಕ್ಕೆ ಹಿನ್ನಡೆಯಾಗಿದೆ.
ಚುನಾವಣಾ ಆಯೋಗ ಈ ಮೊದಲು ನಿರ್ಧರಿಸಿದಂತೆ ಮೊದಲು ಅಂಚೆ ಮತಗಳ ಎಣಿಕೆ ಮಾಡಲಾಗುತ್ತದೆ. ನಂತರ ಮತಯಂತ್ರದಲ್ಲಿರುವ ಮತಗಳ ಕೌಂಟ್ ಮಾಡಲಾಗುತ್ತದೆ. ಬಳಿಕ ಯಾವುದಾದರೂ ಐದು ಬೂತ್ಗಳ ವಿವಿಪ್ಯಾಟ್ಗಳ ಸ್ಲಿಪ್ಗಳನ್ನು ಎಣಿಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಗಳು ಮುಗಿಯೋದಕ್ಕೆ ಕನಿಷ್ಠ ಅಂದರೂ ಮಧ್ಯಾಹ್ನ ಕಳೆಯಬೇಕು. ಆದರೆ 12 ಗಂಟೆ ಹೊತ್ತಿಗೆಲ್ಲಾ ಒಂದಿಷ್ಟು ಟ್ರೆಂಡ್ಗಳು ಸಿಗುವ ಸಾಧ್ಯತೆಗಳಿವೆ.