ಬೆಂಗಳೂರು: ಕಾಸರಗೋಡಿನಲ್ಲಿ ನಡೆದಿದೆ ಎನ್ನಲಾದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ. ಸಂತ್ರಸ್ತೆ ಪರ ಸಂಸದೆ ಶೋಭಾ ಕರಂದ್ಲಾಜೆ ಕಾನೂನು ಹೋರಾಟಕ್ಕಿಳಿದಿದ್ದಾರೆ.
ಸಂತ್ರಸ್ತೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನಲಾದ ಕೇರಳದ ಯುವಕರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಇಂದು ಮಧ್ಯಾಹ್ನ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಂಸದೆ ಶೋಭಾ ಕರಂದ್ಲಾಜೆ ದೂರು ಕೊಟ್ಟಿದ್ದಾರೆ. ಆ ಯುವಕರು ಯುವತಿ ಮೇಲೆ ಅತ್ಯಾಚಾರ ನಡೆಸಿ, ವೀಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗದಿದ್ದರೆ ವೀಡಿಯೋ ಬಹಿರಂಗಪಡಿಸುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ ಎಂದು ಸಂಸದೆ ಆರೋಪಿಸಿದ್ದಾರೆ.
ಪೊಲೀಸ್ ದೂರು ಕೊಡುವ ಮುನ್ನ ಸಂತ್ರಸ್ತೆಯನ್ನು ಸಂಸದೆಯವರು ಸಿಎಂ ಅವರನ್ನು ಭೇಟಿ ಮಾಡಿಸಿದರು. ಧವಳಗಿರಿ ನಿವಾಸದಲ್ಲಿ ಸಂತ್ರಸ್ತೆಯನ್ನು ಸಿಎಂ ಭೇಟಿ ಮಾಡಿಸಲಾಯ್ತು. ಸಂತ್ರಸ್ತೆಗೆ ನ್ಯಾಯ ಕೊಡಿಸುವ ಭರವಸೆಯನ್ನು ಇದೇ ವೇಳೆ ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ ಎನ್ನಲಾಗಿದೆ. ಜೊತೆಗೆ ಕಾಸರಗೋಡಿನಲ್ಲಿರುವ ಸಂತ್ರಸ್ತೆ ಕುಟುಂಬಕ್ಕೆ ಭದ್ರತೆ ಕೊಡಿಸುವ ಸಂಬಂಧವೂ ಕೇರಳದ ಗೃಹ ಇಲಾಖೆ ಜೊತೆ ಮಾತುಕತೆ ನಡೆಸುವ ಭರವಸೆ ಕೊಟ್ಟರು ಎಂದು ಹೇಳಲಾಗಿದೆ.