ಬೆಂಗಳೂರು: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್(ಕೆಆರ್ಎಸ್ಎ) ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಕ್ರೀಡಾಪಟುಗಳಿಂದ ಹಣ ಪಡೆಯುತ್ತಾರೆ. ಸರ್ವಾಧಿಕಾರಿಯ ರೀತಿ ವರ್ತನೆ ಮಾಡುತ್ತಾರೆ ಎಂದು ಆರೋಪಿಸಲಾಗುತ್ತಿದೆ.
ಅಸೋಸಿಯೇಷನ್ಗೆ ಪಿಕೆ ಭರತ್ ಕುಮಾರ್ ಜನರಲ್ ಸೆಕ್ರೆಟರಿಯಾಗಿ 11 ವರ್ಷದಿಂದ ಇದ್ದಾರೆ. ಇವರು ಮಕ್ಕಳ ಬಳಿಯೇ ದುಡ್ಡು ತೆಗೆದುಕೊಂಡು ದಂಧೆ ಮಾಡುತ್ತಿದ್ದಾರೆ. 10 ವರ್ಷಗಳಿಂದ ಅಸೋಸಿಯೇಷನ್ನಲ್ಲಿ ಎಲೆಕ್ಷನ್ ನಡೆಸದೇ ಸರ್ವಾಧಿಕಾರಿಯ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ 22 ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷರು ಪ್ರತಿಭಟನೆ ಮಾಡಿದರು.
ಭರತ್ ಕುಮಾರ್ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ . 1976ರಲ್ಲಿ ಅಸೋಸಿಯೇಷನ್ ಶುರುವಾಗಿದೆ. 1976- 1986ರವರೆಗೂ ಅಸೋಸಿಯೇಷನ್ನ ಎಲ್ಲಾ ದಾಖಲೆಗಳಮನ್ನು ಸಲ್ಲಿಸಲಾಗಿದೆ. ಆದರೆ 1986ರಿಂದ ಇಲ್ಲಿಯವರೆಗೂ ಯಾವುದೇ ದಾಖಲೆಯನ್ನ ಸಲ್ಲಿಸಿಲ್ಲ. ಈ ಮೂಲಕ ವರ್ಷಕ್ಕೆ 1 ಕೋಟಿಗೂ ಹೆಚ್ಚು ಹಣವನ್ನ ಲಪಟಾಯಿಸುತ್ತಿದ್ದಾರೆ. ಮಕ್ಕಳು ಕೊಡುವ ರಿಜಿಸ್ಟ್ರೇಷನ್ ಫೀಸ್ ಅನ್ನು ಸಹ ಬಳಸಿಕೊಂಡಿದ್ದಾರೆ. ಸೊಸೈಟಿ ಅಕ್ಟ್ 1960ರ ಪ್ರಕಾರ ಲೆಕ್ಕಪತ್ರ, ಆಕ್ಟಿವಿಟಿ ರಿಪೋರ್ಟ್ ಪ್ರತಿ ವರ್ಷ ಸಲ್ಲಿಕೆ ಮಾಡದೇ ಮಕ್ಕಳ ಕ್ರೀಡಾ ಭವಿಷ್ಯವನ್ನ ಭರತ್ ಕುಮಾರ್ ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಸೋಸಿಯೇಷನ್ನಲ್ಲಿ 4 ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು. ಆದರೆ ಯಾವ ಚುನಾವಣೆಯೂ ನಡೆಸಿಲ್ಲ. ಕಾರ್ಯದರ್ಶಿ ಪಿಕೆ ಭರತ್ ಕುಮಾರ್ ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ. ಅಧ್ಯಕ್ಷರಾದ ಐಎಎಸ್ ಅಧಿಕಾರಿ ಲಕ್ಷ್ಮಿ ನಾರಾಯಣ್ ಅವರ ಸಹಕಾರ ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳ ಭವಿಷ್ಯ ಇವರಿಂದಾಗಿ ಹಾಳಾಗುತ್ತಿದೆ. ಮಕ್ಕಳಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸಿಗದ ರೀತಿ ಇವರು ಮಾಡ್ತಿದ್ದಾರೆ. ನ್ಯಾಷನಲ್ ಸರ್ಟಿಫಿಕೇಟ್ ಕೊಡಬೇಕು ಅಂದರೆ ದುಡ್ಡು ಕೊಡಬೇಕು. ಎಲ್ಲದಕ್ಕೂ ದುಡ್ಡು, ದುಡ್ಡು ಅಂತ ಮಕ್ಕಳ ಪ್ರತಿಭೆಗಳನ್ನ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಬೆಂಗಳೂರು ಜಿಲ್ಲೆಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಭರತ್ ಕುಮಾರ್ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿತ್ತು. ಪ್ರಶ್ನೆ ಮಾಡಿದ್ದಕ್ಕೆ ಬೆಂಗಳೂರನ್ನ 4 ಝೋನ್ ಮಾಡಲು ಭರತ್ ಕುಮಾರ್ ಮುಂದಾಗಿದ್ದಾರೆ. ಇವರ ದಾಂಧಲೆ ಹೆಚ್ಚಾಗಿದ್ದರಿಂದ ನಾವು ಪ್ರತಿಭಟನೆ ಹಾದಿ ತುಳಿದಿದ್ದೇವೆ. ನಮಗೆ ನ್ಯಾಯ ಬೇಕು, ಪಿಕೆ ಭರತ್ ಕುಮಾರ್ ರಾಜೀನಾಮೆ ನೀಡಬೇಕು. ಕೂಡಲೇ ಚುನಾವಣೆಯಾಗಬೇಕು. ಭರತ್ ಕುಮಾರ್ ಅವರು ಮನೆಯಲ್ಲೇ ಸಭೆ ಮಾಡಿ ತೀರ್ಮಾನಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಅದನ್ನ ಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.