ಬೆಂಗಳೂರು: ಚೈತ್ರ ಪೂರ್ಣಿಮೆಯ ದಿನವಾದ ಶುಕ್ರವಾರ ಮಧ್ಯರಾತ್ರಿ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬೆಂಗಳೂರು ಕರಗ ಮಹೋತ್ಸವ ವೈಭವಪೂರ್ಣವಾಗಿ ನಡೆಯಿತು.
ಕರಗ ಹೊತ್ತಿದ್ದ ಅರ್ಚಕ ಎನ್. ಮನು ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ನೂರಾರು ವೀರಕುಮಾರರು ಗೋವಿಂದಾ ಗೋವಿಂದಾ ಎಂದು ನಾಮಸ್ಮರಣೆ ಮಾಡುತ್ತಾ ಕರಗದೊಂದಿಗೆ ಹೆಜ್ಜೆ ಹಾಕಿದರು.
ಅವೆನ್ಯೂ ರಸ್ತೆಯಿಂದ ಆರಂಭವಾದ ಕರಗದ ಮೆರವಣಿಗೆ, ಕಬ್ಬನ್ ಪಾರ್ಕ್ ಆಂಜನೇಯ ದೇವಾಲಯ, ಸಿದ್ದಣ್ಣ ಗಲ್ಲಿಯಿಂದ ಅವೆನ್ಯೂ ರಸ್ತೆ ಮಾರ್ಗವಾಗಿ ಕೆ.ಆರ್. ಮಾರುಕಟ್ಟೆ ಮೂಲಕ ಬೆಳಗಿನ ಜಾವ 6 ಗಂಟೆಗೆ ಮತ್ತೆ ದೇವಾಲಯ ತಲುಪಿತು. ಈ ಕ್ಷಣಕ್ಕೆ ಲಕ್ಷಾಂತರ ಜನ ಸಾಕ್ಷಿಯಾದರು.