– ಕರಗ ಸಾಗುವ ದಾರಿಯಲ್ಲಿ ಕಾಮಗಾರಿ
– ಕರಗ ಸಮಿತಿಗೆ 800 ವರ್ಷಗಳ ಇತಿಹಾಸ ಮುರಿಯುವ ಭೀತಿ
ಬೆಂಗಳೂರು: ಬೆಂಗಳೂರು ಇತಿಹಾಸದಲ್ಲಿ ಕರಗಕ್ಕೆ ತನ್ನದೇ ಆದ ಮಹತ್ವ ಇದೆ. ಪ್ರತಿ ವರ್ಷ ಕೂಡ ಕರಗ ಸಂಭ್ರಮಕ್ಕೆ ಯಾವುದೇ ಧಕ್ಕೆಯಾಗದಂತೆ ಸಾಂಪ್ರದಾಯಿಕ ಆಚರಣೆ ಮಾಡಲಾಗುತ್ತಿದೆ. ಆದರೆ ಈ ಬಾರಿಯ ಬಿಬಿಎಂಪಿ (BBMP) ಯಡವಟ್ಟಿನಿಂದ ಕರಗ ಇತಿಹಾಸದ ಕೆಲ ಸಂಪ್ರದಾಯವನ್ನ ಮುರಿಯುವ ಸ್ಥಿತಿ ಎದುರಾಗಿದೆ. ಕರಗ ಸಮಿತಿ ಟೆನ್ಷನ್ ಹೆಚ್ಚು ಮಾಡಿದೆ.
ಬೆಂಗಳೂರು ಕರಗ (Bengaluru Karaga) ನಗರದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ತನ್ನದೇ ಭಕ್ತರು, ಪ್ರಸಿದ್ಧಿಯನ್ನ ಹೊಂದಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ನೆರವೇರುತ್ತಾ ಬರುತ್ತಲೇ ಇದೆ. ಆದರೆ ಈ ಬಾರಿ ವಿಶ್ವವಿಖ್ಯಾತ ಕರಗಕ್ಕೆ ಬಿಬಿಎಂಪಿಯೇ ಅಡಚಣೆ ಮಾಡಿದಂತಿದೆ. ನೂರಾರು ವರ್ಷಗಳಿಂದ ನಡೆದು ಬಂದಿರುವ ಕೆಲವೊಂದು ಸಂಪ್ರದಾಯಗಳನ್ನ ಬದಲಾವಣೆ ಮಾಡಬೇಕಾದ ಗೊಂದಲಕ್ಕೆ ಕರಗ ಸಮಿತಿ ಸಿಲುಕಿದೆ. ಇದನ್ನೂ ಓದಿ: ಏ.4ರಿಂದ 14ರವರೆಗೆ ಬೆಂಗಳೂರು ಕರಗ – 20 ಲಕ್ಷ ಜನ ಭಾಗಿ ನಿರೀಕ್ಷೆ
ಎಸ್.ಪಿ ರೋಡ್, ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಕಳೆದ ಮೂರು ತಿಂಗಳಿನಿಂದ ಒಳಚರಂಡಿ, ರಸ್ತೆ ಕಾಮಗಾರಿ ಆರಂಭಿಸಿದ ಬಿಬಿಎಂಪಿ ಇನ್ನೂ ಕೂಡ 10% ನಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕರಗ ಆರಂಭವಾಗೋಕೆ ಕೇವಲ 25 ದಿನ ಮಾತ್ರ ಬಾಕಿ ಇದೆ. ಹೀಗಿರುವಾಗ 3 ತಿಂಗಳಲ್ಲಿ ಮುಗಿಯದ ಕೆಲಸ 25 ದಿನದಲ್ಲಿ ಆಗೋಕೆ ಸಾಧ್ಯನಾ ಎನ್ನುವ ಪ್ರಶ್ನೆ ಮೂಡಿದೆ.
ಕರಗ ಶಕ್ತ್ಯೋತ್ಸವ ದಿನ ರಥೋತ್ಸವ, ಕರಗ ಶಕ್ತ್ಯೋತ್ಸವ ಕೂಡ ಇದೇ ಮಾರ್ಗದಲ್ಲಿ ಸಾಗಬೇಕು. ಆದರೆ ಇಡೀ ರಸ್ತೆಯನ್ನ ಸಂಪೂರ್ಣ ಅಗೆದು ಕಾಮಗಾರಿ ಶುರು ಮಾಡಿರುವ ಕಾರಣ ಸಾಗಿಹೋಗೋದು ಸಾಧ್ಯವೇ ಇಲ್ಲ. ಇದರಿಂದ ಬೇರೆ ಮಾರ್ಗಗಳಲ್ಲಿ ಸಾಗಬೇಕಾದರೆ, ಇತಿಹಾಸವನ್ನ ಮುರಿದಂತಾಗಲಿದೆ. ಇದೇ ದಾರಿಯಲ್ಲಿ ಹೋಗುವುದು ಅಸಾಧ್ಯ. ಹೀಗಾಗಿ, ಮುಂದ್ಹೇಗೆ ಎನ್ನುವ ಚಿಂತೆ ಸಮಿತಿಗೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಮೊಹಮ್ಮದ್ ಶಮಿ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆದ ಕೊಹ್ಲಿ
ಲಕ್ಷಾಂತರ ಜನ ಸಂಭ್ರಮದಲ್ಲಿ ಸೇರುವ ಕಾರಣ ಸಾಕಷ್ಟು ಅಪಾಯಗಳು ಈ ಮಾರ್ಗದಲ್ಲಿವೆ. ಅನೇಕ ಕಡೆ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳನ್ನ ಅಗೆದಿರುವ ಕಾರಣ ಬರುವವರು ಕತ್ತಲೆಯಲ್ಲಿ ಕೊಂಚ ಯಾಮಾರಿದರೂ ಅಪಾಯದ ಸಾಧ್ಯತೆ ಇದೆ.