ಬೆಂಗಳೂರು: ಸತತ ಚುನಾವಣೆಗಳ ಸೋಲು, ಶಾಸಕರ ಪಕ್ಷಾಂತರ, ಸಮ್ಮಿಶ್ರ ಸರ್ಕಾರದ ಪತನ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಜೆಡಿಎಸ್ ಪಕ್ಷ ಹೈರಾಣಾಗಿದೆ. ಹೊಸ ವಿಷಯ ಅಂದ್ರೆ ಜೆಡಿಎಸ್ ಗೆ ಅಧಿಕಾರ ಹೋದ ಮೇಲೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಭವ್ಯವಾಗಿ ನಿರ್ಮಾಣ ಮಾಡಿದ್ದ ಜೆಡಿಎಸ್ ಕಚೇರಿ ಖಾಲಿ ಹೊಡೆಯುತ್ತಿದೆ.
ಕೃಷ್ಣ ಮಿಲ್ ಬಳಿ ಇರೋ ಜೆಡಿಎಸ್ ಕಚೇರಿ ಈಗ ಬಣಗುಡುತ್ತಿದೆ. ಸಮ್ಮಿಶ್ರ ಸರ್ಕಾರ ಇದ್ದಾಗ ಕಚೇರಿಯು ನಿತ್ಯ ಕಾರ್ಯಚಟುವಟಿಕೆಗಳ ತಾಣವಾಗಿತ್ತು. ನೂರಾರು ಕಾರ್ಯಕರ್ತರು, ಸಚಿವರು ಹೀಗೆ ಕಚೇರಿ ತುಂಬಿ ತುಳುಕುತ್ತಿತ್ತು. ಮಾಜಿ ಪ್ರಧಾನಿ ದೇವೇಗೌಡರಂತೂ ನಿತ್ಯ ಕಚೇರಿಗೆ ಬಂದು ಸಭೆಗಳ ಮೇಲೆ ಸಭೆಗಳನ್ನು ಮಾಡುತ್ತಿದ್ದರು. ಯಾವಾಗ ಲೋಕಸಭೆ ಮತ್ತು ಉಪ ಚುನಾವಣೆ ಸೋಲಾಯ್ತೋ ಜೆಡಿಎಸ್ ಕಚೇರಿಗೆ ನಾಯಕರು, ಕಾರ್ಯಕರ್ತರು ಬರುವುದನ್ನು ನಿಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯಾವ ನಾಯಕರು ಕಚೇರಿ ಕಡೆ ಸುಳಿಯುತ್ತಿಲ್ಲವಂತೆ. ಕಾರ್ಯಕರ್ತರ ಸದ್ದು ಇಲ್ಲದಂತಾಗಿದೆ. ದೇವೇಗೌಡರು ಕೂಡ ಕಚೇರಿಗೆ ಬರೋದು ಕಡಿಮೆ ಮಾಡಿದ್ದಾರೆ. ಹೀಗಾಗಿ ಜೆಡಿಎಸ್ ಕಚೇರಿ ಫುಲ್ ಖಾಲಿ ಖಾಲಿ ಆಗಿದೆ.
ಆನಂದ್ ರಾವ್ ಸರ್ಕಲ್ ಬಳಿಕ ಕಚೇರಿಯನ್ನ ಕಾಂಗ್ರೆಸ್ ಪಕ್ಷ ಕೋರ್ಟಿನಲ್ಲಿ ಹೋರಾಡಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ನಂತರ ದೇವೇಗೌಡರು ಏಕಾಂಗಿ ಜೆಡಿಎಸ್ ಕಚೇರಿ ಕಟ್ಟಿದರು. ಹೀಗೆ ಬೆವರು ಸುರಿಸಿ ಕಟ್ಟಿದ ಕಚೇರಿ ಇಂದು ಖಾಲಿ ಖಾಲಿಯಾಗಿ ಕಾಣುತ್ತಿರುವುದು ಮಾತ್ರ ವಿಪರ್ಯಾಸವೇ ಎನ್ನಬಹುದು.