ಬೆಂಗಳೂರು: ಇಟಲಿಯಲ್ಲಿ ರಾಜ್ಯಕ್ಕೆ ಮರಳಲಾಗದೇ ಸಿಕ್ಕಿಕೊಂಡಿರುವ ಕನ್ನಡಿಗರ ಕಷ್ಟಕ್ಕೆ ರಾಜ್ಯ ಸರ್ಕಾರ ಮಿಡಿದಿದೆ. ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಡ ಹಾಕಿ ಕಾರ್ಯಸಾಧನೆ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಇಟಲಿಗೆ ವಿಶೇಷ ವಿಮಾನ ಹೋಗುತ್ತಿದ್ದು ಶೀಘ್ರದಲ್ಲೇ ಕನ್ನಡಿಗರು ತವರಿಗೆ ಮರಳಲಿದ್ದಾರೆ.
ಈ ಸಂಬಂಧ ವಿಧಾನಸೌಧದಲ್ಲಿ ಪಬ್ಲಿಕ್ ಟಿವಿ ಜೊತೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಮಾತನಾಡಿ, ಇಟಲಿಯಲ್ಲಿ ಕನ್ನಡಿಗರ ಸಮಸ್ಯೆ ಗೊತ್ತಾದ ತಕ್ಷಣ ಕೇಂದ್ರದ ಗಮನಕ್ಕೆ ನಾವು ತಂದಿದ್ದೆವು. ಕನ್ನಡಿಗರನ್ನು ಕರೆತರುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ವೈದ್ಯರು ಮತ್ತು ಅಧಿಕಾರಿಗಳ ತಂಡ ಇಟಲಿಗೆ ಹೋಗಿದೆ. ಇಟಲಿಯಲ್ಲಿರುವ ಕನ್ನಡಿಗರ ವೈದ್ಯಕೀಯ ತಪಾಸಣೆ ಕೂಡಾ ನಡೆಸಲಾಗುತ್ತಿದೆ ಎಂದರು. ಇದನ್ನು ಓದಿ: 154 ಮಂದಿ ಉದ್ಯೋಗಿಗಳಿರುವ ಕಚೇರಿಗೆ ಹಾಜರಾಗಿ ತೆರಳಿದ್ದ ಕೊರೊನಾ ಪೀಡಿತ
ಇಟಲಿಯಿಂದ ಕನ್ನಡಿಗರನ್ನು ಕರೆತರಲು ವಿಶೇಷ ವಿಮಾನ ಹೋಗಿದೆ. ವಿಶೇಷ ವಿಮಾನದಲ್ಲಿ ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರಲಾಗುತ್ತದೆ. ಅವರ ಸಂಬಂಧಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಇದೇ ವೇಳೆ ಅಶ್ವತ್ಥನಾರಾಯಣ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಇದನ್ನು ಓದಿ: ‘ಪ್ಲೀಸ್ ನಮ್ಮನ್ನು ರಕ್ಷಿಸಿ’ – ಇಟಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ 50ಕ್ಕೂ ಹೆಚ್ಚು ಕನ್ನಡಿಗರು
ಇತರೇ ಕರೊನಾ ಪೀಡಿತ ದೇಶಗಳಿಗೂ ನಮ್ಮ ವೈದ್ಯ ಮತ್ತು ಅಧಿಕಾರಿಗಳ ತಂಡ ಕಳುಹಿಸಿ ಮಾಹಿತಿ ಪಡೆಯುವ ಕೆಲಸವನ್ನೂ ಮಾಡುತ್ತೇವೆ. ಎಲ್ಲೆಲ್ಲಿ ಕನ್ನಡಿಗರು ಇದ್ದಾರೋ ಅವರ ವೈದ್ಯಕೀಯ ತಪಾಸಣೆಗೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.