ಬೆಂಗಳೂರು: ಪಾದರಾಯನಪುರ ಜೆಡಿಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾಗೆ ವಿಶೇಷ ತನಿಖಾ ತಂಡ(ಎಸ್ಐಟಿ) ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ನೀಡಿದೆ.
ಪಾಷಾ ಮೊದಲನೇ ದಿನದ ತನಿಖೆಯ ವೇಳೆ ಪೊಲೀಸರಿಗೆ ಅಮೂಲ್ಯ ಹೇಗೆ ವೇದಿಕೆ ಮೇಲೆ ಬಂದಳು? ಆಕೆಯನ್ನು ಆಹ್ವಾನ ಮಾಡಿದರು ಯಾರು ನನಗೆ ಗೊತ್ತಿಲ್ಲ ಅನ್ನೋದು ಬಿಟ್ಟರೆ ಬೇರೆ ಏನನ್ನು ಹೇಳಿರಲಿಲ್ಲ. ಈ ಕಾರಣಕ್ಕೆ ಚಿಕ್ಕಪೇಟೆ ಎಸಿಪಿ ಮಹಾಂತರೆಡ್ಡಿ, ಉಪ್ಪಾರಪೇಟೆ ಇನ್ಸ್ ಪೆಕ್ಟರ್ ಸುರೇಶ್ ನೇತೃತ್ವದ ತನಿಖಾ ತಂಡ ಘಟನೆ ನಡೆದ ಬಗ್ಗೆ ಪ್ರಮುಖ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಪಾಷಾಗೆ ಕಳಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಕುರಿತಂತೆ ಮತ್ತೊಮ್ಮೆ ತನಿಖೆಗೆ ಬರುವಾಗ ಕೊಟ್ಟಿರುವ ಪ್ರಶ್ನಾವಳಿಗೆ ವಿಚಾರಣೆ ವೇಳೆ ಸಮರ್ಪಕವಾಗಿ ಉತ್ತರ ಕೊಡಲೇಬೇಕೆಂದು ಸೂಚಿಸಲಾಗಿದೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿದ್ದ ಎನ್.ಆರ್.ಸಿ, ಸಿಎಎ, ವಿರುದ್ಧ ಪ್ರತಿಭಟಸಭೆಯಲ್ಲಿ ಅಮೂಲ್ಯ ಲಿಯೋನ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಳು. ಫ್ರೀಡಂಪಾರ್ಕಿನಲ್ಲಿ ಕಾರ್ಯಕ್ರಮ ನಡೆಸಲು ಪಾಲಿಕೆಯ ಸದಸ್ಯ ಇಮ್ರಾನ್ ಪಾಷಾ ಅನುಮತಿ ಪಡೆದಿದ್ದರು. ಪೊಲೀಸರು ಅನುಮತಿಯನ್ನು ಕೊಡುವಾಗ ಷರತ್ತು ಬದ್ಧ ಅನುಮತಿಯನ್ನು ಕೊಟ್ಟಿದ್ದರು.
ಸಿಎಎ, ಎನ್.ಆರ್.ಸಿ ವಿರುದ್ಧ ಪ್ರತಿಭಟನ ಕಾರ್ಯಕ್ರಮದಲ್ಲಿ ಅಹಿತಕರ ಘಟನೆಗಳು ಹಾಗೂ ಶಾಂತಿ ಭಂಗ ಉಂಟು ಮಾಡುವ ಘಟನೆಗಳು ನಡೆದರೆ ಆಯೋಜಕರೆ ಹೊಣೆ ಎಂದು ಪೊಲೀಸರು ಇಮ್ರಾನ್ಗೆ ಹೇಳಿದ್ದರು. ಈಗ ಕಾರ್ಯಕ್ರಮದಲ್ಲಿ ಶಾಂತಿ ಭಂಗ ಉಂಟು ಮಾಡಿದ ಹಿನ್ನೆಲೆಯಲ್ಲಿ ಇಮ್ರಾನ್ ಪಾಷಾ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಅಮೂಲ್ಯ ಈ ಕಾರ್ಯಕ್ರಮದ ಮುನ್ನ ದಿನವೇ ಫೇಸ್ಬುಕ್ ನಲ್ಲಿ ಓವೈಸಿ ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದಳು. ಅಷ್ಟೇ ಅಲ್ಲದೇ ಭಾಷಣದ ವೇಳೆ ಕಾರ್ಯಕ್ರಮದ ಬ್ಯಾಡ್ಜ್ ಧರಿಸಿದ್ದಳು.