ಬೆಂಗಳೂರು: ನಗರದ ಯಲಹಂಕದ ಅಪಾರ್ಟ್ ಮೆಂಟ್ನಲ್ಲಿ ಐಎಫ್ಎಸ್ ಹಿರಿಯ ಅಧಿಕಾರಿ ಡಾ.ಅವತಾರ್ ಸಿಂಗ್ ಅವರ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹರ್ಯಾಣದ ಯಮುನಾನಗರ ಮೂಲದ ಅವತಾರ್ ಸಿಂಗ್ (58) ಅವರು ಶುಗರ್ ಕಾಯಿಲೆಯಿಂದ ಬಳಲುತ್ತಿದ್ದರು. ಅವತಾರ್ ಸಿಂಗ್ ಅವರು ಪತ್ನಿ, ಇಬ್ಬರು ಮಕ್ಕಳ ಜೊತೆಗೆ ಯಲಹಂಕದ ಪ್ರೆಸ್ಟೀಜ್ ಮೌಂಟ್ ಕಾರ್ಲೋ ಅಪಾರ್ಟ್ ಮೆಂಟ್ನ 4ನೇ ಮಹಡಿಯ 3,401 ನಂಬರ್ ಫ್ಲಾಟ್ನಲ್ಲಿ ವಾಸವಾಗಿದ್ದರು.
ಅರಣ್ಯ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವತಾರ್ ಸಿಂಗ್ ಅವರು 1 ತಿಂಗಳ ಹಿಂದಷ್ಟೇ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ಅವರ ನಿವೃತ್ತಿಗೆ ಇನ್ನು ಎರಡೇ ವರ್ಷಗಳು ಬಾಕಿಯಿದ್ದವು. ಆದರೆ ಇಂದು ಬೆಳಗ್ಗೆ ವಾಕಿಂಗ್ ಹೋಗಿ ವಾಪಸ್ ಮನೆಗೆ ಬಂದ ಅವತಾರ್ ಸಿಂಗ್ ಬಳಿಕ ತಮ್ಮ ರೂಂ ಸೇರಿಕೊಂಡಿದ್ದರು. ಈ ವೇಳೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
1990ರ ಬ್ಯಾಚ್ನ ಎಕ್ಸ್ ಕೆಡರ್ ಐಎಫ್ಎಸ್ ಅಧಿಕಾರಿಯಾಗಿದ್ದ ಅವತಾರ್ ಸಿಂಗ್ ಅವರು ಕೋಲಾರದಿಂದ ಕೆಲಸ ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆ, ಮಂಡಳಿಗಳಲ್ಲಿ ಕೆಲಸ ನಿರ್ವಹಿಸಿದ್ದರು. ಶನಿವಾರ ಅರಣ್ಯಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಅವತಾರ್ ಸಿಂಗ್ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.