ಬೆಂಗಳೂರು: ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಹೊಸಕೋಟೆಯ ಬೈಲನರಸಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಶರತ್, ಡಿಸೆಂಬರ್ 5ರಂದು ತಾಲೂಕಿನ ಇತಿಹಾಸದಲ್ಲೇ ಮೊದಲನೇ ಬಾರಿ ಉಪಚುನಾವಣೆ ಬಂದಿದೆ. ಎಂಟಿಬಿ ನಾಗರಾಜ್ ಅವರಿಗೆ ಐಟಿ ಅಥವಾ ಇಡಿ ಇಲಾಖೆಯ ಭಯ ಬಂತೋ ಗೊತ್ತಿಲ್ಲ. ತಾವು ಮಾಡಿದ ಸಂಪತ್ತನ್ನು ಉಳಿಸಿಕೊಳ್ಳಬೇಕು ಎಂಬ ದುರುದ್ದೇಶದಿಂದ ರಾಜೀನಾಮೆ ಕೊಟ್ಟು ಉಪಚುನಾವಣೆ ಬರುವಂತೆ ಮಾಡಿದ್ದಾರೆ.
ಎಂಟಿಬಿ ನಾಗರಾಜ್ ಅವರು ಬಂದಿದ್ದು ರಿಯಲ್ ಎಸ್ಟೆಟ್ ನಿಂದಾಗಿ ಎಂದು ಎಲ್ಲರಿಗೂ ಗೊತ್ತಿದೆ. ರಿಯಲ್ ಎಸ್ಟೇಟ್ ಅಂದ್ರೆ ಭೂಮಿಗಳಿಗೆ ಬೆಲೆ ಕಟ್ಟೋದು. ನಾವೆಲ್ಲರೂ ರೈತರು. ಹಾಗಾಗಿ ಭೂಮಿ ತಾಯಿಗೆ ಪೂಜೆ ಮಾಡುತ್ತೇವೆ. ಆದರೆ ಅವರು ಭೂಮಿತಾಯಿಯನ್ನು ವ್ಯಾಪಾರ ಮಾಡುತ್ತಾರೆ. ಪ್ರತಿಯೊಂದಕ್ಕೂ ಬೆಲೆ ಕಟ್ಟುತ್ತಾರೆ. ಇದರಲ್ಲಿ ಏಜೆಂಟುಗಳು ಕೂಡ ಇರುತ್ತಾರೆ. ಹೀಗೆ ರಿಯಲ್ ಎಸ್ಟೇಟ್ ನಲ್ಲಿ ಏಜೆಂಟ್ ಗಳನ್ನು ನೋಡಿದ್ದೇವೆ. ಇದೀಗ ರಾಜಕೀಯದಲ್ಲೂ ಎಜೆಂಟ್ ಗಳು ಇದ್ದಾರೆ. ಅವರ ಕೆಲಸವೇನೆಂದರೆ, ಇವನು ಗ್ರಾಮ ಪಂಚಾಯ್ತಿ ಸದಸ್ಯ. ಇವನ ಬೆಲೆ 2 ಲಕ್ಷ, ತಾಲೂಕು ಮಟ್ಟದಲ್ಲಿ ಓಡಾಡುವವನಿಗೆ 5-6 ಲಕ್ಷ, ಜಿಲ್ಲಾ ಪಂಚಾಯ್ತಿ ಸದಸ್ಯನಿಗೆ 75 ಲಕ್ಷ ಎಂದು ಹೇಳುವುದಾಗಿದೆ. ಹೀಗೆ ಎಲ್ಲರಿಗೂ ಬೆಲೆ ಕಟ್ಟಿ ನನಗೂ ಒಂದು ಬೆಲೆ ಕಟ್ಟಿದ್ದಾರೆ. ನನ್ನ ಬೆಲೆ 120 ಕೋಟಿ ಅಂತೆ. ಎಂಟಿಬಿ ನಾಗರಾಜ್ ಅವರೇ ನೀವು 120 ಕೋಟಿ ಅಲ್ಲ, ನಿಮ್ಮ ಇಡೀ ಆಸ್ತಿ ಕೊಟ್ರೂ ನಾನು ನಿಮ್ಮ ಆಮಿಷಕ್ಕೆ ಒಳಗಾಗಲ್ಲ. ನಾನು ಮಾರಾಟಕ್ಕಿಲ್ಲ, ಸ್ವಾಭಿಮಾನನಾ ಖರೀದಿ ಮಾಡಲು ಸಾಧ್ಯವೇ ಇಲ್ಲ. ಸ್ವಾಭಿಮಾನಕ್ಕಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದ ಜನರಿಗಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಶರತ್ ಬಚ್ಚೇಗೌಡ ಎಂಟಿಬಿ ನಾಗರಾಜು ಒಂದೇ ನಾಣ್ಯದ ಎರಡು ಮುಖಗಳು ಎಂಬ ಸಿದ್ದರಾಮಯ್ಯ ಆರೋಪಕ್ಕೆ ಟಾಂಗ್ ಕೊಟ್ಟ ಶರತ್, ನಾನು ಯಾವುದೇ ಕಾರಣಕ್ಕೂ ಎಂಟಿಬಿ ನಾಗರಾಜು ಆಗಲು ಸಾಧ್ಯವಿಲ್ಲ. ಅವರ ಸಿದ್ಧಾಂತಗಳೇ ಬೇರೆ ನಮ್ಮ ಸಿದ್ಧಾಂತಗಳೆ ಬೇರೆ. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಅವರು ಒಂದೇ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನಾನು ಇವತ್ತು ಪಕ್ಷೇತರ ಅಭ್ಯರ್ಥಿಯಾಗಿರುವುದು ಎಂಟಿಬಿ ನಾಗರಾಜು ಬಿಜೆಪಿಗೆ ಬಂದರು ಎಂದಲ್ಲ. ಈ ಭಾಗದಲ್ಲಿ ನಮ್ಮ ಮೂರು ತಲೆ ಮಾರಿನ ನಾಯಕತ್ವದ ಪ್ರಶ್ನೆ. ಈ ಭಾಗದ ಜನರೊಂದಿಗೆ ನಮಗೆ ಇರುವ ಅವಿನಾಭಾವಕ್ಕೆ ಬೆಲೆ ಕೊಟ್ಟು ನಾನು ಪಕ್ಷೇತರ ಅಭ್ಯರ್ಥಿ ಆಗಿದ್ದೇನೆ ಎಂದರು.