– ಮೋದಿ ಇರುವವರೆಗೂ ಕಾಂಗ್ರೆಸ್ಸಿಗೆ ಉಳಿಗಾಲವಿಲ್ಲ
– ಕೈ ಹೈಕಮಾಂಡ್ ಸತ್ತು ಹೋಗಿದೆ
ಬೆಂಗಳೂರು: ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ತನ್ನ ಬಳಿ ಸಾಲ ಪಡೆದ ಕಾಂಗ್ರೆಸ್ ನಾಯಕ ಹೆಸರನ್ನು ಹೇಳಿದ್ದಾರೆ.
ಇಂದು ಹೊಸಕೋಟೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕಾರ್ಯಕ್ರಮ ಮಾಡುತ್ತಿರುವ ಅವರು ಭಾಷಣದ ವೇಳೆ ಮಾತನಾಡಿ, ನಾನು ಯಾರ ಋಣದಲ್ಲಿ ಇಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡ ಮತ್ತು ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದಿದ್ದಾರೆ. ಅದನ್ನು ಇಂದಿಗೂ ವಾಪಸ್ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಕೃಷ್ಣಬೈರೇಗೌಡ ಅವರು ಕೂಡ ಲೋಕಸಭಾ ಚುನಾವಣೆಯಲ್ಲಿ ಹಣವನ್ನು ಸಾಲ ತೆಗೆದುಕೊಂಡಿದ್ದ. ಆದರೆ ಮತ್ತೆ ಅವನು ವಾಪಸ್ ಮಾಡಿದ. ಬೈರೇಗೌಡ ಬಿಟ್ಟರೆ ಬೇರೆ ಯಾರು ಹಣ ವಾಪಸ್ ಮಾಡಿಲ್ಲ. ನಾನು ಮಂಜುನಾಥ್ ಸ್ವಾಮಿ ಭಕ್ತ ಸುಳ್ಳು ಹೇಳಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ಸಿನ ಕೆಲ ನಾಯಕರು ಇದ್ದಾರೆ. ನನ್ನ ಬಳಿ ಹಣ ಪಡೆದು ವಾಪಸ್ ಮಾಡದೆ ಈಗ ನನ್ನನ್ನೇ ಸೋಲಿಸಲು ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಕಿಡಿಕಾದರು.
ನನ್ನ ಬಳಿ 1,200 ಕೋಟಿಗೂ ಅಧಿಕ ಹಣ ಇದೆ. ನಾನು ಅಷ್ಟು ಆಸ್ತಿಯ ಒಡೆಯ. ಆದರೆ ಇದೆಲ್ಲಾ ನ್ಯಾಯವಾಗಿ ಸಂಪಾದನೆ ಮಾಡಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ. ನಾವು ಪಕ್ಷ ಬಿಡುವುದಕ್ಕೆ ಸಿದ್ದರಾಮಯ್ಯ ಕಾರಣ. ಸಿಎಂ ಜತೆ ಮಾತನಾಡಿ ಶಾಸಕರ ಸಮಸ್ಯೆ ಬಗೆಹರಿಸಿ ಎಂದು ಹೇಳಿದ್ದೆವು. ಆದರೆ ಅವರು ನನ್ನ ಮತ್ತು ನನ್ನ ಮಗನ ಕ್ಷೇತ್ರದ ಕೆಲಸವೇ ಮಾಡಿಕೊಡಿತ್ತಿಲ್ಲ ಅಂತ ನಮ್ಮ ಬಳಿ ಅಸಹಾಯಕತೆ ವ್ಯಕ್ತಪಡಿಸಿದರು ಎಂದು ಸಿದ್ದು ವಿರುದ್ಧ ಮತ್ತೆ ವಾಗ್ದಾಳಿ ಮಾಡಿದರು.
ಮೈತ್ರಿ ಮುರಿದುಕೊಂಡು ವಿಪಕ್ಷದಲ್ಲಿ ಕೂರೋಣ ಎಂದು ನಾವು ಸಿದ್ದರಾಮಯ್ಯಗೆ ಸಲಹೆ ಕೊಟ್ಟಿದ್ದೆವು. ಆದರೆ ಅವರು ಹೈಕಮಾಂಡ್ ಕಡೆ ಬೆರಳು ತೋರಿಸಿದರು. ಎಲ್ಲಿದೆ ಹೈಕಮಾಂಡ್, ಅದು ಈಗ ಲೋಕಮಾಂಡ್ ಆಗಿದೆ. ನಾನು ಅಷ್ಟು ಕೆಲಸ ಮಾಡಿದರು 12 ಸಾವಿರ ಮತ ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಬಂತು. ನೆಹರು ಮಾಡದಿರುವ ಕೆಲಸವನ್ನು ಮೋದಿ ಮಾಡಿದ್ದಾರೆ. ಮೋದಿ ಇರುವವರೆಗೂ ನಿಮ್ಮ ಕಾಂಗ್ರೆಸ್ ಮತ್ತು ಪ್ರದೇಶಿಕ ಪಕ್ಷಗಳಿಗೆ ಉಳಿಗಾಲ ಇಲ್ಲ ಎಂದು ಹೇಳಿದ್ದಾರೆ.