ಬೆಂಗಳೂರು: ಸುಮನಹಳ್ಳಿ ಆಯ್ತು, ಇದೀಗ ಹೆಬ್ಬಾಳ ಫ್ಲೈಓವರ್ ಸರದಿ. ಪ್ರಯಾಣಿಕರೇ ಹೆಬ್ಬಾಳ ಫ್ಲೈಓವರ್ ಮೇಲೆ ಹೋಗೋದಕ್ಕೂ ಮುನ್ನ ಎಚ್ಚರವಾಗಿರಿ. ಮೇಲ್ಸೇತುವೆ ಸವೆದು ಎರಡು ಕಡೆ ಗುಂಡಿ ಬಿದ್ದಿದೆ. ಹೀಗಾಗಿ ಸೇತುವೆ ಮೇಲೆ ನಿಂತು ಈ ಗುಂಡಿ ಮೂಲಕ ಕೆಳಗಡೆ ನೋಡಿದರೆ ಓಡಾಡುವ ಜನ, ವಾಹನಗಳು ಕಾಣುತ್ತವೆ. ಈ ಕಾರಣದಿಂದಾಗಿ ಹೆಬ್ಬಾಳ ಮೇಲ್ಸೇತುವೆ ಡೇಂಜರ್ ಝೋನ್ ಆಗಿದೆ.
ಹೌದು. ಬೆಂಗಳೂರಿನ ಫ್ಲೈಓವರ್ ಗಳ ಮೇಲೆ ವಾಹನ ಸವಾರರು ಸಂಚರಿಸೋಕೆ ಭಯ ಪಡುತ್ತಿದ್ದಾರೆ. ಈ ಮೇಲ್ಸೇತುವೆ ಮೇಲಿನ ಕಬ್ಬಿಣದ ಡ್ರಿಲ್ ಸವೆದು, ಫ್ಲೈಓವರ್ ನಲ್ಲಿ ಎರಡು ಕಡೆ ಗುಂಡಿ ಬಿದ್ದಿದೆ. ಈ ಮೂಲಕ ಕೆಳಗಡೆ ನೋಡಿದರೆ ಕೆಳಗಡೆ ಓಡಾಡುವ ವಾಹನಗಳು, ಜನರು ಕಾಣುತ್ತಾರೆ. ಅಷ್ಟು ಪ್ರಮಾಣದಲ್ಲಿ ಗುಂಡಿ ಬಿದ್ದಿದ್ದರೂ ಇದರ ಮೇಲೆಯೇ ವಾಹನಗಳು ಓಡಾಡ್ತಿದ್ದು, ಅಪಾಯ ಯಾವ ಸಮಯದಲ್ಲಿ ಆಗುತ್ತೋ ಗೊತ್ತಿಲ್ಲ. ಈ ರೀತಿ ಆದರೂ ಬಿಡಿಎ ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳು ಇದರ ಕಡೆ ಗಮನಹರಿಸಿಲ್ಲ. ಈ ರೀತಿಯ ಅಪಾಯ ಸೃಷ್ಟಿಸುವ ರೀತಿ ಗುಂಡಿ ಬಿದ್ದಿದೆ. ಜನ ಇದರ ಮೇಲೆ ಸಂಚರಿಸೋಕೆ ಆತಂಕ ಪಡುತ್ತಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಂಚಾರಿತಜ್ಞರು ಕೂಡ ಆತಂಕ ವ್ಯಕ್ತಪಡಿಸ್ತಿದ್ದು, ಕಳಪೆ ಕಾಮಗಾರಿಯಿಂದ ಈ ರೀತಿ ಆಗಿದೆ. ಹೀಗಾಗಿ ಮುಂಚಿತವಾಗಿ ಎಚ್ಚೆತ್ತು ಕ್ರಮ ಜರುಗಿಸಬೇಕು. ಇಲ್ಲ ಅಂದರೆ ಸೇತುವೆ ಕುಸಿಯುವ ಸಂಭವ ಇದೆ. ದೊಡ್ಡ ಅಪಾಯ ಎದುರಾಗಿ ಅಪಘಾತಗಳಾಗುತ್ತವೆ. ಅಧಿಕಾರಿಗಳು ಎಚ್ಚೆತ್ತು ಸರಿಪಡಿಸದೇ ಹೋದರೆ ಅಪಾಯ ಗ್ಯಾರಂಟಿ ಅಂತ ಮುನ್ಸೂಚನೆ ಕೊಡುತ್ತಿದ್ದಾರೆ.
ಒಟ್ಟಾರೆ ಹೆಬ್ಬಾಳ ಫ್ಲೈಓವರ್ ಡೇಂಜರ್ ಸ್ಪಾಟ್ ಆಗಿದೆ. ಈಗಾಗಲೇ ಮೇಲು ಸೇತುವೆ ಮೇಲೆ ಗುಂಡಿ ಬಿದ್ದು ಸೇತುವೆ ಕುಸಿಯುವ ಸಂಭವ ಹೆಚ್ಚಿದೆ. ಹಲವಾರು ಬಾರಿ ವಾಹನ ಸವಾರರು ಬಿದ್ದು ಗಾಯಗೊಂಡು, ಸಾವನ್ನಪ್ಪಿರುವ ಉದಾಹರಣೆಗಳಿವೆ. ಬಿಬಿಎಂಪಿ, ಬಿಡಿಎ ಮತ್ತು ಸರ್ಕಾರದ ಪ್ರತಿನಿಧಿಗಳು ಎಚ್ಚೆತ್ತು ಮುನ್ನೆಚ್ಚರಿಕಾ ಕ್ರಮಗಳನ್ನ ಜರುಗಿಸ್ತಾರಾ ಕಾದು ನೋಡಬೇಕಿದೆ.