ಬೆಂಗಳೂರು: ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಮಾಜಿ ಪ್ರಿಯಕರ ಹಳೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾನೆ ಎಂದು ವೈದ್ಯೆಯೊಬ್ಬರು ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದಾರೆ.
ಚೆನ್ನೈ ಮೂಲದ 26 ವರ್ಷದ ಸೌಮ್ಯಾ(ಹೆಸರು ಬದಲಾಯಿಸಲಾಗಿದೆ) ವೈದ್ಯೆಯಾಗಿ ಬೆಂಗಳೂರಿನಲ್ಲಿ ವೃತ್ತಿ ಮಾಡುತ್ತಿದ್ದಾರೆ. ನರೇಶ್ (ಹೆಸರು ಬದಲಾಯಿಸಲಾಗಿದೆ) ಮಾನಸಿಕವಾಗಿ ಕಿರುಕುಳ ನೀಡುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾನೆ ಎಂದು ದೂರಿದ್ದಾರೆ.
ನಡೆದದ್ದು ಏನು?
ಕಾಲೇಜು ದಿನಗಳಲ್ಲಿ ಸೌಮ್ಯಾ ಹಾಗೂ ನರೇಶ್ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಬಳಿಕ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇಬ್ಬರು ಎರಡು ವರ್ಷ ವಾಸವಾಗಿದ್ದರು. ನರೇಶ್ ಡಿಪ್ಲೋಮಾ ಪೂರೈಸಿದ್ದ. ಇಬ್ಬರಲ್ಲಿ ಮನಸ್ತಾಪ ಉಂಟಾಗಿ ಈಗ ಬೇರೆಯಾಗಿದ್ದಾರೆ. ಆದರೆ ನರೇಶ್ ಸೌಮ್ಯಾ ಬಳಿ ಪ್ಯಾನ್ ಕಾರ್ಡ್, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮತ್ತು ಬಂಗಾರದ ಆಭರಣಗಳನ್ನು ಪಡೆದು, ತನ್ನ ಬಳಿ ಇಟ್ಟುಕೊಂಡಿದ್ದ.
ತನಗಾದ ಅನ್ಯಾಯದಿಂದ ಸೌಮ್ಯಾ ವನಿತಾ ಸಹಾಯವಾಣಿ ಮೂಲಕ ಪೊಲೀಸ್ ಹಾಗೂ ಪರಿಹಾರ್ ಎನ್ಜಿಓ ಮೊರೆ ಹೋಗಿದ್ದಳು. ವಕೀಲರೊಂದಿಗೆ ಕೋರ್ಟ್ಗೆ ಹಾಜರಾಗಿದ್ದ ನರೇಶ್ ಸೌಮ್ಯಾ ಬಳಿ ಪಡೆದುಕೊಂಡಿದ್ದ 2 ಲಕ್ಷ ರೂ. ಹಾಗೂ ವಸ್ತುಗಳನ್ನು ಮರಳಿಸುವುದಾಗಿ ಒಪ್ಪಿಕೊಂಡಿದ್ದ. ಆದರೆ ನರೇಶ್ ಕಳೆದ ಎರಡು ತಿಂಗಳಿನಿಂದ ತನ್ನ ವರಸೆ ಬದಲಿಸಿ, ಸೌಮ್ಯಾ ಜೊತೆಗಿದ್ದ ಏಕಾಂತದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ತನ್ನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅಂತಾ ಸೌಮ್ಯಾ ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಿ, ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ನರೇಶ್ಗಾಗಿ ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv