ಬೆಂಗಳೂರು: ಸ್ವಚ್ಛ ಭಾರತ್ ಬೆಂಗಳೂರು ಎಲ್ಲಿಗೆ ಹೋಗಿದೆ? ಬೀದಿಯಲ್ಲಿ ಕಸ ಬಿದ್ದು ಕೊಳೆಯುತ್ತಿದೆ ಎಂದು ಸಂಸದ ಡಿಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮಳೆಯ ಅವಾಂತರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳು ಯಾಕೆ ಇದರ ಬಗ್ಗೆ ಹೇಳುತ್ತಿಲ್ಲ? ನಾವಿದ್ದಾಗ ವೀಡಿಯೋ ತೆಗೆದು ವರದಿ ಮಾಡಲಾಗುತ್ತಿತ್ತು. ನಮ್ಮ ಉಸ್ತುವಾರಿ ಸಚಿವರನ್ನು ಪ್ರಶ್ನೆ ಮಾಡುತ್ತಿದ್ದರು. ಇವತ್ತು ಬೆಂಗಳೂರು ಮುಳುಗಿಹೋಗಿದೆ. ಯಾಕೆ ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಕೇಳಿದರು.
ಮಂಡೂರು ಕಸವನ್ನು ದಿನ ತೋರಿಸಲಾಗುತ್ತಿತ್ತು. ಆಗ ನಾವು ಆರು ತಿಂಗಳಲ್ಲಿ ಬಂದ್ ಮಾಡಿದ್ದೇವೆ. ಇವತ್ತು ಕಸದಲ್ಲೂ ಕಮಿಷನ್ ಎತ್ತಿತ್ತಿದ್ದಾರೆ. ರೋಡ್,ಗುಂಡಿ ಮುಚ್ಚುವುದರಲ್ಲೂ ಕಮಿಷನ್. ಸತ್ತ ಹೆಣ ಹೂಳಲು ಕಮೀಷನ್ ಪಡೆಯುತ್ತಿದ್ದೀರಿ. ಇಂತಹ ಭ್ರಷ್ಟ ವ್ಯವಸ್ಥೆ ಸರ್ಕಾರ ನಾವು ನೋಡಿಲ್ಲ ಎಂದು ಕಿಡಿಕಾರಿದರು.
ಸರ್ಕಾರದಲ್ಲಿ 40% ಕಮಿಷನ್ ಭ್ರಷ್ಟಾಚಾರ ನಡೆಯುತ್ತಿದೆ. ಮೋದಿ 40% ಕಮಿಷನ್ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರದಲೂ ಯಾರೂ ಮಾತನಾಡುತ್ತಿಲ್ಲ. ಅದರಲ್ಲಿ ನಿಮಗೂ ಪಾಲು ಇದೆಯಾ? ಆರ್ಎಸ್ಎಸ್ನವರು ಏಕೆ 40% ಕಮಿಷನ್ ಬಗ್ಗೆ ಮಾತನಾಡುತ್ತಿಲ್ಲ. ನಿಮಗೂ ಪಾಲು ಇದ್ಯಾ? ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು.