– ಸದ್ದಿಲ್ಲದೇ ಮತ್ತೆ ತಲೆಯೆತ್ತಿದೆ ಜಾಹೀರಾತು ಮಾಫಿಯಾ?
ಬೆಂಗಳೂರು: ಕೆಲ ತಿಂಗಳಿಂದ ಸಿಲಿಕಾನ್ ಸಿಟಿ ಜನ, ಬ್ಯಾನರ್, ಫ್ಲೆಕ್ಸ್ ಕಾಟದಿಂದ ಮುಕ್ತಿ ಹೊಂದಿದ್ದರು. ಆದ್ರೆ ಈಗ ಸಿಕ್ಕ ಸಿಕ್ಕಲ್ಲಿ ಅನಧಿಕೃತ ಬ್ಯಾನರ್ ಗಳು ರಾರಾಜಿಸುತ್ತಿವೆ. ಈ ಮೂಲಕ ಮಾಫಿಯಾವೊಂದು ಸದ್ದಿಲ್ಲದೆ ತಲೆಯತ್ತಿದೆ. ಕೋರ್ಟ್ ವಿಧಿಸಿದ್ದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. 2018ರ ಅಗಸ್ಟ್ ತಿಂಗಳಲ್ಲಿ ರಾಜ್ಯ ಹೈಕೋರ್ಟ್ ಬೆಂಗಳೂರು ನಗರದಲ್ಲಿ ಜಾಹೀರಾತು ಬ್ಯಾನ್ ಮಾಡಿ ಆದೇಶ ನೀಡಿತ್ತು. ಆದರೆ ಈಗ ದೊಡ್ಡ ಬ್ಯಾನರ್ ಫಲಕದ ಪ್ರದರ್ಶನವಾಗುತ್ತಿವೆ. ಹೆಬ್ಬಾಳ ಫ್ಲೈಓವರ್ ಮೇಲೆ 120 ಮೀಟರ್ ಜಾಗದಲ್ಲಿ ಖಾಸಗಿ ಕಂಪನಿಯ 4 ದೊಡ್ಡದಾದ ಜಾಹೀರಾತುಗಳು ರಾರಾಜಿಸುತ್ತಿವೆ. ಈ ಬಗ್ಗೆ ಪರಿಸರವಾದಿಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಹೆಬ್ಬಾಳಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜಾಜಿನಗರ, ಮಾಗಡಿ ರೋಡ್ ಸೇರಿದಂತೆ ಎಲ್ಲೆಡೆ ಅನಧಿಕೃತ ಜಾಹೀರಾತುಗಳು ರಾರಾಜಿಸುತ್ತಿವೆ. ಈ ಬ್ಯಾನ್ ಜಾಹೀರಾತುಗಳ ವಿಚಾರವಾಗಿ ಹೈಕೋರ್ಟ್ ಪದೇ ಪದೇ ಚಾಟಿ ಬೀಸ್ತಿದ್ರು ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತು ಕೊಂಡಿಲ್ಲ.
ಪಬ್ಲಿಕ್ ಟಿವಿ ಈ ಬಗ್ಗೆ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅವರಲ್ಲಿ ಸ್ಪಷ್ಟನೆ ಕೇಳಿದಾಗ, ಹೆಬ್ಬಾಳದಲ್ಲಿ ತಲೆಯೆತ್ತಿರೋ ಜಾಹೀರಾತಿಗೆ ಬಿಡಿಎ ಅನುಮತಿ ನೀಡಿದೆಯಂತೆ. 30 ವರ್ಷಕ್ಕೆ ಅನುಮತಿ ನೀಡಿದ್ದು, ಕೆಎಂಸಿ ಆಕ್ಟ್ ಹಾಗೂ ಜಾಹೀರಾತು ಬೈಲಾ ಉಲ್ಲಂಘನೆಯಾದ್ರೆ ಫ್ಲೆಕ್ಸ್ ಸಂಬಂಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳಿಗೆ ಬ್ರೇಕ್ ಹಾಕಿ, ಬೆಂಗಳೂರಿನ ಅಂದವನ್ನು ಕಾಪಾಡೋ ಜವಬ್ದಾರಿ ಬಿಬಿಎಂಪಿ ಮೇಲಿದೆ ಎನ್ನುವುದಂತೂ ಸುಳ್ಳಲ್ಲ.