ಬೆಂಗಳೂರು: ಯಾವುದೇ ಕಾರಣಕ್ಕೂ ಮೀನುಗಾರರಿಗೆ ತೊಂದರೆಯಾಗದಂತೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ನಡೆಯುತ್ತಿರುವ ಬಂದ್ಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ ಅಂತ ಕಿಡಿಕಾರಿದರು.
- Advertisement 2
ಸಾಗರಮಾಲಾ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿದೆ. 2017ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಅಂದು ಶಾಸಕರಾಗಿದ್ದ ಸತೀಶ್ ಶೈಲ್ ಕೂಡ ಶಂಕು ಸ್ಥಾಪನೆ ಮಾಡಿದ್ದರು. ಅಂದು ವಿರೋಧ ಮಾಡದ ಕಾಂಗ್ರೆಸ್ ಮುಖಂಡರು ಇಂದು ವಿರೋಧ ಮಾಡುತ್ತಿರುವುದು ಯಾಕೆ ಅಂತ ಪೂಜಾರಿ ಪ್ರಶ್ನೆ ಮಾಡಿದರು.
- Advertisement 3
- Advertisement 4
ಇದು ಬಿಜೆಪಿ ವಿರೋಧದ ಪ್ರತಿಭಟನೆ, ಸುಮ್ಮನೆ ರಾಜಕೀಯಕ್ಕಾಗಿ ಕಾಂಗ್ರೆಸ್ಸಿನವರು ಬಂದ್ ಮಾಡಿಸುತ್ತಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು. ಅಲ್ಲದೆ ಸಾಂಪ್ರದಾಯಿಕ ಮತ್ತು ಯಾಂತ್ರಿಕ ಮೀನುಗಾರಿಕೆಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಾಗರಮಾಲಾ ಯೋಜನೆಗೆ ಮೀನುಗಾರರ ವಿರೋಧ – ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಸಗಣಿ, ಚಪ್ಪಲಿ
ರವೀಂದ್ರನಾಥ್ ಟ್ಯಾಗೂರ್ ಕಡಲತೀರಕ್ಕೆ ತೊಂದರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಮೀನುಗಾರರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಅಂತ ಮನವಿ ಮಾಡಿದರು. ಅಗತ್ಯ ಬಿದ್ದರೆ ಮೀನುಗಾರರು ಮತ್ತು ಜನ ಪ್ರತಿನಿಧಿಗಳ ಗೊಂದಲ ನಿವಾರಣೆಗೆ ವಿಧಾನಸೌಧದಲ್ಲಿಯೇ ಸಭೆ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.
ಸ್ಥಳೀಯ ಶಾಸಕಿ ರೂಪಾಲಿ ನಾಯಕ್ ಮಾತನಾಡಿ, ಮಾಜಿ ಶಾಸಕ ಸತೀಶ್ ಸೈಲ್, ಮಾಜಿ ಸಚಿವ ಆನಂದ್ ಆಸ್ನೋಟೀಕರ್, ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಮಾಡುತ್ತಿರುವವರಿಗೆ ಸಾಗರಮಾಲಾ ಯೋಜನೆ ಬಗ್ಗೆಯೇ ಗೊತ್ತಿಲ್ಲ. ಆದರೂ ವಿರೋಧ ಮಾಡುತ್ತಿದ್ದಾರೆ. ಜನರು ಯಾರ ಹೇಳಿಕೆ, ಮಾತಿಗಳಿಗೂ ಬೆಲೆ ಕೊಡಬಾರದು ಅಂತ ಮನವಿ ಮಾಡಿದರು. ಅಂದು ಕಾಂಗ್ರೆಸ್ ನಾಯಕರು ಯಾರೂ ಇದಕ್ಕೆ ವಿರೋಧ ಮಾಡಿರಲಿಲ್ಲ. ಇಂದು ಕಾಂಗ್ರೆಸ್ ನಾಯಕರು, ಮಾಜಿ ಸಚಿವರು ವಿರೋಧ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು.
ನಾನು ಬೆಳಗ್ಗೆಯಿಂದ ಸಂಜೆವರೆಗೆ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ. ಕ್ಷೇತ್ರದ ಅಭಿವೃದ್ಧಿ ನಾನು ಸದಾ ಕೆಲಸ ಮಾಡ್ತಿದ್ದೇನೆ.ಹೀಗಿದ್ರು ನನ್ನ ಭಾವಚಿತ್ರಕ್ಕೆ ಚಪ್ಪಲಿ,ಸಗಣಿ ಹಾಕ್ತಾರೆ.ಇದು ಯಾವ ನ್ಯಾಯ ಅಂತ ಅಸಮಾಧಾನ ಹೊರ ಹಾಕಿದ್ರು. ಬಿಜೆಪಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡ್ತಿದ್ದಾರೆ. ಹಣ ತಂದು ಪ್ರತಿಭಟನೆಗೆ ಜನರನ್ನ ಕರೆದುಕೊಂಡು ಬರ್ತಿದ್ದಾರೆ ಅಂತ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು. ಮೀನುಗಾರಿಗೆ ತೊಂದರೆಯಾಗದಂತೆ ನಾವು ನೋಡಿಕೊಳ್ತೀವಿ. ರವೀಂದ್ರನಾಥ್ ಟ್ಯಾಗೂರ್ ಬೀಚ್ ಯಾವುದೇ ತೊಂದರೆ ಆಗದಂತೆ ಕ್ರಮವಹಿಸುತ್ತೇವೆ ಅಂತ ಮೀನುಗಾರರಿಗೆ ಭರವಸೆ ಕೊಟ್ರು.